ADVERTISEMENT

ಮಹಡಿಯಿಂದ ಬಿದ್ದು ಬಾಲಕ ಸಾವು ಪ್ರಕರಣ: ಸಮಗ್ರ ತನಿಖೆಗೆ ತಂದೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 3:54 IST
Last Updated 8 ಆಗಸ್ಟ್ 2022, 3:54 IST
ಸುಶಾನ್ ರೈ
ಸುಶಾನ್ ರೈ   

ಪುತ್ತೂರು: ನಗರದ ಹೊರವಲಯದ ಬೊಳುವಾರಿನ ‘ಕೀರ್ತನ್ ರೆಸಿಡೆನ್ಸಿ’ ವಸತಿ ಸಮುಚ್ಚಯದ ಮಹಡಿಯಿಂದ ಬಿದ್ದು ಮೃತಪಟ್ಟ ಬಾಲಕ ಸುಶಾನ್ ರೈ ಸಾವಿನ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಬಾಲಕನ ತಂದೆ ಪುತ್ತೂರು ನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಬೊಳುವಾರು ಬೈಲಿನಲ್ಲಿ ವಾಸ್ತವ್ಯವಿರುವ ಪದ್ಮುಂಜ ಕೆನರಾ ಬ್ಯಾಂಕ್‌ನ ನಿವೃತ ಮ್ಯಾನೇಜರ್, ಬೊಳುವಾರು ದುರ್ಗಾಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ಕ್ಷೇತ್ರದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಮನೋಹರ ರೈ ಪುತ್ರ, 9ನೇ ತರಗತಿ ವಿದ್ಯಾರ್ಥಿ ಸುಶಾನ್ ರೈ (15) ಆ.5ರಂದು ಸಂಜೆ ಬೊಳುವಾರು ವಸತಿ ಸಮುಚ್ಚಯವೊಂದರ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ. ತಕ್ಷಣ ಸ್ಥಳೀಯರು ಆತನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದ. ಈ ಕುರಿತ ಸಮಗ್ರ ತನಿಖೆಗೆ ಅವರು ಒತ್ತಾಯಿಸಿದ್ದಾರೆ.

ನಿಗೂಢತೆ ಸೃಷ್ಟಿಸಿದ ಪ್ರಕರಣ: ಸುಶಾನ್ ರೈ ಕಲಿಕೆಯಲ್ಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಪ್ರತಿದಿನ ಬೆಳಿಗ್ಗೆ ಮನೋಹರ್ ರೈ ಅವರು ಆತನನ್ನು ಶಾಲೆಗೆ ಬಿಟ್ಟು ಬರುತ್ತಿದ್ದರು. ಸಂಜೆ ಆತ ಆಟೋರಿಕ್ಷಾದಲ್ಲಿ ಬೊಳುವಾರಿಗೆ ಬಂದು, ಅಲ್ಲಿಂದ ಮನೆಗೆ ನಡೆದುಕೊಂಡು ಬರುತ್ತಿದ್ದ. ಆ.5ರಂದು ಶಾಲೆಗೆ ಹೋಗಿದ್ದ ಆತ ಸಂಜೆ ಆಟೋ ರಿಕ್ಷಾದಲ್ಲಿ ಬಂದು ಬೊಳುವಾರಿನಲ್ಲಿ ಇಳಿದು, ನಿತ್ಯ ನಡೆದುಕೊಂಡು ಹೋಗುವ ರಸ್ತೆಯನ್ನು ಬದಲಾಯಿಸಿ ಬೊಳುವಾರು ವಸತಿ ಸಮುಚ್ಚಯದ ಬಳಿಯ ರಸ್ತೆಯ ಮೂಲಕವಾಗಿ ಮನೆ ಕಡೆಗೆ ಹೊರಟು ಬಂದಿದ್ದ. ಆದರೆ, ನೇರವಾಗಿ ವಸತಿ ಸಮುಚ್ಚಯಕ್ಕೆ ಹೋಗಿದ್ದಾನೆ.

ADVERTISEMENT

ಸುಹಾನ್‌ ರೈ ಅಂದು ಸಂಜೆ 4.20ರ ವೇಳೆಗೆ ವಸತಿ ಸಮುಚ್ಚಾಯಕ್ಕೆ ಬಂದಿರುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆತನ ಶಾಲಾ ಬ್ಯಾಗ್ ವಸತಿ ಸಮುಚ್ಚಯದ 5ನೇ ಮಹಡಿಯಲ್ಲಿ ಪತ್ತೆಯಾಗಿದೆ. ಆದರೆ, ಆತ ಮಹಡಿಯಿಂದ ಹೇಗೆ ಬಿದ್ದ ಎಂಬುದು ಇನ್ನೂ ನಿಗೂಢವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.