
ಉಜಿರೆ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ನ.18ರಂದು ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನದ 93ನೆ ಅಧಿವೇಶನ ನಡೆಯಲಿದ್ದು, ಸಚಿವ ಎಂ.ಬಿ.ಪಾಟೀಲ್ ಉದ್ಘಾಟಿಸುವರು.
ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಎಸ್.ಸೂರ್ಯಪ್ರಕಾಶ್ ಪಂಡಿತ್, ಅಂಕಣ ಬರಹಗಾರ ತನ್ವೀರ್ ಅಹಮ್ಮದ್ ಉಲ್ಲಾ ಉಪನ್ಯಾಸ ನೀಡುವರು.
ಸರ್ವಧರ್ಮ ಸಮ್ಮೇಳನದ ಹಿನ್ನೆಲೆ: ಯಾವುದೇ ಜಾತ್ರೆ, ಉತ್ಸವಗಳು ಸಾರ್ಥಕ ಬದುಕಿಗೆ ಉಪಯುಕ್ತ ಸಂದೇಶ, ಮಾಹಿತಿ, ಮಾರ್ಗದರ್ಶನ ದೊರಕಬೇಕು ಎಂಬ ಉದ್ದೇಶದಿಂದ 1933ರಲ್ಲಿ ಅಂದಿನ ಧರ್ಮಾಧಿಕಾರಿ ಕೀರ್ತಿಶೇಷ ಡಿ.ಮಂಜಯ್ಯ ಹೆಗ್ಗಡೆ ಅವರು ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನವನ್ನು ಆರಂಭಿಸಿದರು. ಬಳಿಕ ಪ್ರತಿವರ್ಷವೂ ಲಕ್ಷದೀಪೋತ್ಸವದ ವೇಳೆ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದೆ.
ವಿವಿಧ ಧರ್ಮಗಳ ವಿದ್ವಾಂಸರು, ಮುಖಂಡರು, ಧಾರ್ಮಿಕ ನೇತಾರರನ್ನು ಆಮಂತ್ರಿಸಿ ಎಲ್ಲಾ ಧರ್ಮಗಳ ಸಾರವನ್ನು ಅರಿತು, ಸರ್ವಧರ್ಮ ಸಮನ್ವಯ ಸಾಧಿಸುವುದೇ ಸರ್ವಧರ್ಮ ಸಮ್ಮೇಳನದ ಉದ್ದೇಶವಾಗಿದ್ದು, ಸಮ್ಮೇಳನದ ಉದ್ಘಾಟಕರು, ಅಧ್ಯಕ್ಷರು ಹಾಗೂ ವಿದ್ವಾಂಸರೆಲ್ಲ ಅರ್ಧಗಂಟೆ ಮುಂಚಿತವಾಗಿ ಹೆಗ್ಗಡೆ ಅವರ ನಿವಾಸವಾದ ಬೀಡಿನಲ್ಲಿ ಸೇರುವರು. ಬಳಿಕ ಭವ್ಯ ಮೆರವಣಿಗೆಯಲ್ಲಿ ಹೆಗ್ಗಡೆ ಅವರನ್ನು ಹಾಗೂ ಗಣ್ಯ ಅತಿಥಿಗಳನ್ನು ಅಮೃತವರ್ಷಿಣಿ ಸಭಾಭವನಕ್ಕೆ ಕರೆದುಕೊಂಡು ಹೋಗಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.