ADVERTISEMENT

ದ.ಕ.ಜಿಲ್ಲೆ: ಶೇ.63.41 ಕುಟುಂಬಗಳ ಸಮೀಕ್ಷೆ ಪೂರ್ಣ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಪ್ರಗತಿ ಪರಿಶೀಲಿಸಿದ ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 7:32 IST
Last Updated 7 ಅಕ್ಟೋಬರ್ 2025, 7:32 IST
ಸಭೆಯಲ್ಲಿ ಮೀನಾಕ್ಷಿ ಆರ್ಯ, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಧು ಬಂಗಾರಪ್ಪ, ದರ್ಶನ್ ಎಚ್‌ವಿ, ನರವಡೆ ವಿನಾಯಕ ಕಾರ್ಬಾರಿ ಹಾಗೂ ಪ್ರತಿಭಾ ಕುಳಾಯಿ ಭಾಗವಹಿಸಿದ್ದರು
ಸಭೆಯಲ್ಲಿ ಮೀನಾಕ್ಷಿ ಆರ್ಯ, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಧು ಬಂಗಾರಪ್ಪ, ದರ್ಶನ್ ಎಚ್‌ವಿ, ನರವಡೆ ವಿನಾಯಕ ಕಾರ್ಬಾರಿ ಹಾಗೂ ಪ್ರತಿಭಾ ಕುಳಾಯಿ ಭಾಗವಹಿಸಿದ್ದರು   

ಮಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ 1ರ ವರೆಗೆ ಶೇ 63.41 ಕುಟುಂಬಗಳ ಮಾಹಿತಿ ಕಲೆಹಾಕುವ ಕಾರ್ಯ ಪೂರ್ಣಗೊಂಡಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪ್ರಗತಿ ಪರಿಶೀಲನೆ ಸಭೆಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಈ ಮಾಹಿತಿ ಒದಗಿಸಿದರು.   

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,86,134  ಕುಟುಂಬಗಳ ಸಮೀಕ್ಷೆ ನಡೆಯಬೇಕಿದ್ದು, ಅವುಗಳಲ್ಲಿ 3,71,694  ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿರುತ್ತದೆ. ಸಮೀಕ್ಷೆಗೆ ಅಕ್ಟೋಬರ್ 7 ರವರೆಗೆ ಸಮಯಾವಕಾಶವಿದ್ದು, ಜಿಲ್ಲೆಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ವಿಶ್ವಾಸವಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ADVERTISEMENT

ಸಚಿವ  ಎಸ್.ಮಧು ಬಂಗಾರಪ್ಪ, ‘ಸಮೀಕ್ಷೆಗೆ ಶಾಲಾ ಶಿಕ್ಷಣ ಇಲಾಖೆಯು ಅತ್ಯಧಿಕ ಮಾನವ ಸಂಪನ್ಮೂಲವನ್ನು ಒದಗಿಸಿದೆ. ಸಮೀಕ್ಷೆ ನಡೆಸುವಾಗ ಕ್ಷೇತ್ರ ಮಟ್ಟದಲ್ಲಿ  ಹಲವು ಸಮಸ್ಯೆಗಳಿದ್ದರೂ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ದಸರಾ ರಜೆಯ ಸಮಯದಲ್ಲಿಯೂ ಕಾರ್ಯನಿರ್ವಹಿಸುವ ಮೂಲಕ  ಶ್ಲಾಘನೀಯ ಸೇವೆ ಮಾಡಿದ್ದಾರೆ. ಈ ಸಮೀಕ್ಷೆಯು  ಸರ್ವರನ್ನೂ ಒಳಗೊಂಡಿರಬೇಕು’ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯ ಎಂದರು.

‘ಕೆಲವೊಂದು ಸಮಸ್ಯೆಗಳ ಬಗ್ಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ  ಗಮನಕ್ಕೆ ತಂದು ಮಾರ್ಗದರ್ಶನ ಪಡೆದು ಪರಿಹರಿಸಬೇಕು’ ಎಂದು ಅವರು ಸೂಚಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಮತ್ತು ಮಂಜುನಾಥ ಭಂಡಾರಿ,
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರವಡೆ ವಿನಾಯಕ್  ಕಾರ್ಬಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು, ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ್ ಮೊದಲಾದವರು ಭಾಗವಹಿಸಿದ್ದರು.                                              

ಸುಳ್ಯ ತಾಲ್ಲೂಕಿನ ಎಲ್ಲ ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣ ಪಾಲಿಕೆ ವ್ಯಾಪ್ತಿಯಲ್ಲಿ 1,09,151  ಕುಟುಂಬಗಳ ಸಮೀಕ್ಷೆ ಪೂರ್ಣ 

-ಸಮೀಕ್ಷೆ ಗೊಂದಲದಲ್ಲಿ ಶಿಕ್ಷಕರು

‘ಸಮೀಕ್ಷೆದಾರರು ಮೊದಲು ನಿಗದಿ ಮಾಡಿದ ಮನೆಯ ಬದಲು ಯಾವ ಮನೆಯಲ್ಲಿ ಬೇಕಾದರೂ ಸಮೀಕ್ಷೆ ನಡೆಸಬಹುದು ಎಂದು ಸೂಚನೆ ಬಂದಿತ್ತು. ಯಾವೆಲ್ಲ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂಬ ಮಾಹಿತಿ ಆ್ಯಪ್‌ನಲ್ಲೇ ಸಿಗಲಿದೆ ಎಂದು ಹೇಳಿದ್ದರು. ಆ್ಯಪ್‌ನಲ್ಲಿ ಸಮೀಕ್ಷೆ ನಡೆಯದ ಮನೆಗೆ ತೆರಳಿದಾಗ ಅಲ್ಲಿ ಆಗಲೇ ಸಮೀಕ್ಷೆ ಮುಗಿತ್ತು. ಇದರಿಂದಾಗಿ ಸಮೀಕ್ಷೆದಾರರು ವೃಥಾ ಗೊಂದಲದಲ್ಲಿ ಸಿಲುಕುವಂತಾಗಿದೆ ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.