ಮಂಗಳೂರು: ಯುಜಿಸಿ ಹೊಸದಾಗಿ ಜಾರಿಗೆ ತಂದಿರುವ, ಏಕಕಾಲದಲ್ಲಿ ಎರಡು ಪದವಿಗಳನ್ನು ಅಭ್ಯಾಸ ಮಾಡುವ ಸೌಲಭ್ಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲೂ ಲಭ್ಯವಿದ್ದು ಸಾಂಪ್ರದಾಯಿಕ ವಿವಿಯಲ್ಲಿ ಪದವಿ ಅಭ್ಯಾಸ ಮಾಡುವ ವಿದ್ಯಾರ್ಥಿ ಬೇರೊಂದು ವಿಷಯದಲ್ಲಿ ಮುಕ್ತ ವಿವಿಯಲ್ಲಿ ಪದವಿ ಅಭ್ಯಾಸ ಮಾಡಬಹುದಾಗಿದೆ ಎಂದು ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್ ತಿಳಿಸಿದರು.
ಮುಕ್ತ ವಿವಿಯ ಈ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು ಆಟೊ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಶೇ 30ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಪ್ರವೇಶಾತಿ, ಫಲಿತಾಂಶ ಮತ್ತು ಪ್ರಮಾಣಪತ್ರಗಳ ವಿತರಣೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಕಲಿಕೆಗೆ ಆದ್ಯತೆ ನೀಡಲಾಗಿದ್ದು ಸುಸಜ್ಜಿತ ಪ್ರಯೋಗಾಲಯ ಸಿದ್ಧವಾಗಿದೆ. ಯು ಟ್ಯೂಬ್ ಚಾನಲ್ನಲ್ಲಿ ಮಾಹಿತಿಗಳನ್ನು ಹಂಚುತ್ತಿದ್ದು ಸ್ವಂತ ಸ್ಟುಡಿಯೊ ಮಾಡಲಾಗಿದೆ. ರೇಡಿಯೊ ವಾಹಿನಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶುಲ್ಕ ಪಾವತಿಗೆ ಇಎಂಐ ಸೌಲಭ್ಯ ಕಲ್ಪಿಸಿದ್ದು ಆನ್ಲೈನ್ ಮೂಲಕ ಕಲಿಕಾ ಸಾಮಗ್ರಿ ಪಡೆದುಕೊಳ್ಳುವವರಿಗೆ ಶೇ 15ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗದವರಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು ಕೊವಿಡ್–19ರಿಂದ ಸಾವಿಗೀಡಾದವರ ಮಕ್ಕಳಿಗೆ ಉಚಿತ ಪ್ರವೇಶಾವಕಾಶವಿದೆ’ ಎಂದು ಅವರು ಹೇಳಿದರು.
ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶ ಪ್ರಕ್ರಿಯೆ, ತರಗತಿ ಮತ್ತು ಪರೀಕ್ಷೆಗೆ ಸೌಲಭ್ಯವಿದೆ ಎಂದು ತಿಳಿಸಿದರು.
ಪ್ರಾದೇಶಿಕ ನಿರ್ದೇಶಕ ಬಸವರಾಜ, ರಥಬೀದಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಜಯಕರ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಬಾಲಕೃಷ್ಣ ಶೆಟ್ಟಿ ಹಾಗೂ ಪ್ರೊ. ನಾಗರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.