ADVERTISEMENT

ಮಂಗಳೂರು: ಮೀನುಗಾರನಿಗೆ ತುರ್ತು ನೆರವು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 0:20 IST
Last Updated 28 ಸೆಪ್ಟೆಂಬರ್ 2023, 0:20 IST
<div class="paragraphs"><p>ಹೃದಯಾಘಾತಕ್ಕೆ ಒಳಗಾಗಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಮೀನುಗಾರರೊಬ್ಬರನ್ನು ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಇಂಟರ್‌ಸೆಪ್ಟರ್ ದೋಣಿ ಸಿ–446ರ ಮೂಲಕ ರಕ್ಷಿಸಿ ಕರೆತಂದರು</p></div>

ಹೃದಯಾಘಾತಕ್ಕೆ ಒಳಗಾಗಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಮೀನುಗಾರರೊಬ್ಬರನ್ನು ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಇಂಟರ್‌ಸೆಪ್ಟರ್ ದೋಣಿ ಸಿ–446ರ ಮೂಲಕ ರಕ್ಷಿಸಿ ಕರೆತಂದರು

   

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ವೇಳೆ ಕಡಲಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಮೀನುಗಾರರೊಬ್ಬರಿಗೆ ಸಮುದ್ರದಲ್ಲೇ ಪ್ರಥಮ ಚಿಕಿತ್ಸೆ ಒದಗಿಸಿ, ತಕ್ಷಣವೇ ನವಮಂಗಳೂರು ಬಂದರಿಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಪಡೆಯಲು ಕರಾವಳಿ ರಕ್ಷಣಾ ಪಡೆ ನೆರವಾಯಿತು.

‘ಬೇಬಿ ಮೇರಿ–4’ ಮೀನುಗಾರಿಕಾ ದೋಣಿಯಲ್ಲಿ ಕಡಲಿಗೆ ತೆರಳಿದ್ದ ವಸಂತ ಅವರು ಪಣಂಬೂರು ತೀರದಿಂದ ಸುಮಾರು 36 ನಾಟಿಕಲ್‌ ಮೈಲುಗಳಷ್ಟು ದೂರದಲ್ಲಿ ಕಡಲಿನಲ್ಲಿದ್ದರು. ಮಂಗಳವಾರ ಮಧ್ಯಾಹ್ನ 3.20ರ ಸುಮಾರಿಗೆ ಅವರಿಗೆ ಎದೆ ಬೇನೆ ಹಾಗೂ ಉಸಿರಾಟದ ತೀವ್ರ ಸಮಸ್ಯೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಇನ್ನೊಂದು ಮೀನುಗಾರಿಕಾ ದೋಣಿಯ (ಸುಲ್ತಾನ್ಯ) ಮೀನುಗಾರರು ಈ ಬಗ್ಗೆ ಕರ್ನಾಟಕದ ಕರಾವಳಿ ರಕ್ಷಣಾ ಪಡೆಯ ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿ ತುರ್ತು ನೆರವು ಕೋರಿದ್ದರು.

ADVERTISEMENT

ಇದಕ್ಕೆ ಸ್ಪಂದಿಸಿದ ಕರಾವಳಿ ರಕ್ಷಣಾ ಪಡೆಯು ಸಾಗರ ರಕ್ಷಣಾ ಉಪಕೇಂದ್ರವನ್ನು (ಎಂಆರ್‌ಎಸ್‌ಸಿ) ಸನ್ನದ್ಧಗೊಳಿಸಿ, ತನ್ನೆಲ್ಲ ನೌಕೆಗಳಿಗೆ ತುರ್ತು ರಕ್ಷಣೆಯ ಅಗತ್ಯದ ಕುರಿತ ಸಂದೇಶ ರವಾನಿಸಿತು. ಈ ದೋಣಿಗೆ ಸಮೀಪದಲ್ಲಿದ್ದ ಕರಾವಳಿ ರಕ್ಷಣಾ ತಡೆಯ ಇಂಟರ್‌ಸೆಪ್ಟರ್‌ ದೋಣಿ ಸಿ– 446, ಹೃದಯಾಘಾತದ ಲಕ್ಷಣಗಳನ್ನು ಎದುರಿಸುತ್ತಿದ್ದ ಮೀನುಗಾರ ವಸಂತ ಅವರಿದ್ದ ದೋಣಿಯತ್ತ ಧಾವಿಸಿತು. ಇಂಟರ್‌ ಸೆಪ್ಟರ್ ದೋಣಿಯ ಸಿಬ್ಬಂದಿ ವಸಂತ ಅವರ ಆರೋಗ್ಯ ತಪಾಸಣೆ ನಡೆಸಿ, ಪ್ರಥಮ ಚಿಕಿತ್ಸೆ ಒದಗಿಸಿದರು. ಹೆಚ್ಚಿನ ಚಿಕಿತ್ಸೆ ಸಲುವಾಗಿ ಆ ಮೀನುಗಾರರನ್ನು ಅದೇ ದೋಣಿಯಲ್ಲಿ ಪಣಂಬೂರಿನ ನವಮಂಗಳೂರು ಬಂದರಿನ ದಕ್ಕೆಗೆ ಕರೆತಂದರು.

ಮೀನುಗಾರಿಕಾ ಇಲಾಖೆ ಹಾಗೂ ನವಮಂಗಳೂರು ಬಂದರು ಪ್ರಾಧಿಕಾರದ ನೆರವಿನಿಂದ ಬಂದರಿನ ಜೆಟ್ಟಿಯಲ್ಲಿ ವಸಂತ ಅವರಿಗೆ ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲಾಯಿತು. ಬಳಿಕ ಮೀನುಗಾರಿಕಾ ದೋಣಿ ಮಾಲೀಕರನ್ನು ಸಂಪರ್ಕಿಸಿದ ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಹೃದಯಾಘಾತಕ್ಕ ಒಳಗಾದ ವ್ಯಕ್ತಿಯನ್ನು ನಗರದ ಬೆಂದೂರುವೆಲ್‌ನ ಎಸ್‌ಸಿಎಸ್‌ ಆಸ್ಪತ್ರೆಗೆ ರವಾನಿಸಿ  ಹೆಚ್ಚಿನ ವೈದ್ಯಕೀಯ ನೆರವು ಒದಗಿಸುವುದಕ್ಕೆ ವ್ಯವಸ್ಥೆ
ಕಲ್ಪಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.