ಮಂಗಳೂರು: ಉದ್ಯಮಿಗಳು ಗಳಿಕೆಯ ಒಂದಂಶವನ್ನು ಸಮಾಜಕ್ಕೆ ನೀಡಲು ಮುಂದಾಗಬೇಕು ಎಂದು ಎನ್ಆರ್ಐ ಉದ್ಯಮಿ ಝಕರಿಯಾ ಜೋಕಟ್ಟೆ ಸಲಹೆ ನೀಡಿದರು.
ಮಂಗಳೂರು ಪ್ರೆಸ್ ಕ್ಲಬ್ ಸೋಮವಾರ ಆಯೋಜಿಸಿದ್ದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಗ್ರಾಮೀಣ ಮತ್ತು ಬಡತನದ ಸಮಸ್ಯೆ ಇರುವ ಯುವ ಸಮುದಾಯಕ್ಕೆ ಉದ್ಯೋಗ ಕೊಡಲು ನಾನು ಪ್ರಯತ್ನಿಸಿದ್ದೇನೆ. ಒಂದು ಕಾಲದಲ್ಲಿ ನಾನು ಕಷ್ಟವನ್ನು ಅನುಭವಿಸಿದ್ದರಿಂದ ಬಡತನವೇನೆಂದು ಗೊತ್ತು’ ಎಂದರು.
‘ಕಷ್ಟದ ದಿನಗಳು ಸಂಯಮ ಕಲಿಸಿವೆ. ಬಡತನವೇ ಸಾಧನೆಗೆ ಸ್ಫೂರ್ತಿಯಾಗಿದೆ. ಉದ್ಯೋಗಾಕಾಂಕ್ಷಿಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ತೆರೆಯುವ ಯೋಜನೆ ಇದೆ’ ಎಂದು ಅವರು ಹೇಳಿದರು.
‘ಎಸ್ಎಸ್ಎಲ್ಸಿಯಲ್ಲಿ ಅನುತ್ತೀರ್ಣನಾಗಿ ಬೀದಿ ಬೀದಿ ಸುತ್ತಿ ಬೆಲ್ಲ ಮಾರುತ್ತಿದ್ದ ನಾನು ಕಠಿಣ ಪರಿಶ್ರಮದಿಂದ ದುಡಿದೆ. ಈಗ ಏಳು ಸಾವಿರ ಮಂದಿಗೆ ಉದ್ಯೋಗ ನೀಡುವ ಹಂತಕ್ಕೆ ಬೆಳೆದಿದ್ದೇನೆ. ಆರಂಭದ ದಿನಗಳಲ್ಲಿ ಮಿಕ್ಸ್ ಮಾಡಿದ ಸಿಮೆಂಟ್ ನಿರ್ಮಾಣ ಹಂತದ ಕಟ್ಟಡದ ಮೇಲೆ ಹೊತ್ತುಕೊಂಡು ಹೋಗುವ ಕೆಲಸ ಮಾಡಿದ್ದೆ. ಡ್ರೆಜಿಂಗ್ ಕಂಪನಿಯಲ್ಲೂ ದುಡಿದಿದ್ದೆ. ಪೆಟ್ರೊ ಕೆಮಿಕಲ್ ಕಂಪನಿಯಲ್ಲಿ ದುಡಿದೆ. ನೆದರ್ಲೆಂಡ್ನಲ್ಲಿ ಲಭಿಸಿದ ತರಬೇತಿ ಬದುಕಿನ ದಿಶೆಯನ್ನು ಬದಲಿಸಿತು’ ಎಂದರು.
‘2010ರಲ್ಲಿ ದುಬೈಯಲ್ಲಿ ನಾಲ್ಕು ಮಂದಿ ಸಂಸ್ಥೆಯೊಂದನ್ನು ಆರಂಭಿಸಿದೆವು. ಪಾಲುದಾರರಾಗಿ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಿದ್ದರಿಂದ ಕಂಪನಿ ಕೆಲವೇ ಸಮಯದಲ್ಲಿ ಉತ್ತಮವಾಗಿ ಬೆಳೆಯಿತು. ಎಲ್ಲರೂ ಸೌಹಾರ್ದದಿಂದ ಬದುಕಬೇಕು. ಟೀಕೆಗಳಿಗೆ ಪ್ರತಿಕ್ರಿಯೆ ನೀಡಬಾರದು’ ಎಂದು ಅವರು ಹೇಳಿದರು.
ಎಂಎಸ್ಇಝಡ್ನ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ರಾಮಚಂದ್ರ ಭಂಡಾರ್ಕರ್ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಉಪಸ್ಥಿತರಿದ್ದರು. ಮುಹಮ್ಮದ್ ಆರಿಫ್ ಪಡುಬಿದ್ರಿ ನಿರೂಪಿಸಿದರು. ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.