ADVERTISEMENT

ಕಡಬ ತಾಲ್ಲೂಕು ಕಚೇರಿಗೆ ಮುತ್ತಿಗೆ, ರೈತರ ಆಕ್ರೋಶ

ಕೌಕ್ರಾಡಿ ಪ್ಲಾಟಿಂಗ್ ವಿಳಂಬಕ್ಕೆ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:43 IST
Last Updated 25 ಡಿಸೆಂಬರ್ 2025, 6:43 IST
ಕಡಬ ತಾಲ್ಲೂಕು ಕೌಕ್ರಾಡಿ ಗ್ರಾಮದ ಕೃಷಿ ಭೂಮಿ ಪ್ಲಾಟಿಂಗ್, ಪಹಣಿ ಪತ್ರ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಉಪತಹಶೀಲ್ದಾರ್ ವಿಳಂಬ ಮಾಡಿರುವುದನ್ನು ಖಂಡಿಸಿ ರೈತರು ಕಡಬ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು
ಕಡಬ ತಾಲ್ಲೂಕು ಕೌಕ್ರಾಡಿ ಗ್ರಾಮದ ಕೃಷಿ ಭೂಮಿ ಪ್ಲಾಟಿಂಗ್, ಪಹಣಿ ಪತ್ರ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಉಪತಹಶೀಲ್ದಾರ್ ವಿಳಂಬ ಮಾಡಿರುವುದನ್ನು ಖಂಡಿಸಿ ರೈತರು ಕಡಬ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು   

ಕಡಬ (ಉಪ್ಪಿನಂಗಡಿ): ಕಡಬ ತಾಲ್ಲೂಕಿನ ಕೌಕ್ರಾಡಿ ಗ್ರಾಮದ 123 ಸರ್ವೆ ನಂಬರ್‌ನಲ್ಲಿರುವ 3634.70 ಎಕರೆ ಕೃಷಿ ಭೂಮಿಯ ಪ್ಲಾಟಿಂಗ್ ಹಾಗೂ ಪಹಣಿ ಪತ್ರ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಉಪತಹಶೀಲ್ದಾರ್ ವಿಳಂಬ ಮಾಡಿರುವುದನ್ನು ಖಂಡಿಸಿ ನೂರಕ್ಕೂ ಅಧಿಕ ಫಲಾನುಭವಿ ರೈತರು ಮಂಗಳವಾರ ಕಡಬ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪುತ್ತೂರು ಉಪ ವಿಭಾಗಾಧಿಕಾರಿ ಆದೇಶದಂತೆ ಕೌಕ್ರಾಡಿ ಗ್ರಾಮದ 123ನೇ ಸರ್ವೆ ನಂಬರ್‌ಗೆ ಸಂಬಂಧಿಸಿದ ಕಡತಗಳನ್ನು ಕಡಬ ತಹಶೀಲ್ದಾರ್‌ ಕಚೇರಿಗೆ ರವಾನಿಸಲಾಗಿದ್ದು, ಆದೇಶಾನುಸಾರ ಕಂದಾಯ ಹಾಗೂ ಅರಣ್ಯ ಭೂಮಿಯನ್ನು ಪ್ರತ್ಯೇಕಿಸಿ ಅರಣ್ಯ ಇಲಾಖೆಗೆ ಆರ್‌ಟಿಸಿ ತಯಾರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಉಳಿದ ಪ್ಲಾಟಿಂಗ್ ಹಾಗೂ ಪಹಣಿ ಪತ್ರ ಸಿದ್ಧಪಡಿಸುವ ಮುಂದಿನ ಹಂತದ ಕಡತಗಳನ್ನು ನಾಲ್ಕು ತಿಂಗಳಿನಿಂದ ಉಪತಹಶೀಲ್ದಾರ್‌ ಅವರ ಲಾಗಿನ್‌ನಲ್ಲೇ ಇಟ್ಟುಕೊಂಡು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿದರು.

ರೈತರು ತಹಶೀಲ್ದಾರ್ ಹಾಗೂ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಮುಂದೆ ಅಳಲು ತೋಡಿಕೊಂಡರು. ಕೆಲಸ ಮಾಡದ ಉಪತಹಶೀಲ್ದಾರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ತಕ್ಷಣ ಅವರನ್ನು ಕಡತ ವಿಲೇವಾರಿ ಕಾರ್ಯದಿಂದ ಮುಕ್ತಗೊಳಿಸಿ ಬೇರೆ ಅಧಿಕಾರಿಗೆ ಜವಾಬ್ದಾರಿ ಹಸ್ತಾಂತರಿಸುವಂತೆ ಪಟ್ಟು ಹಿಡಿದರು.

ADVERTISEMENT

ಫಲಾನುಭವಿಗಳ ಒತ್ತಾಯಕ್ಕೆ ಮಣಿದ ಶಾಸಕಿ ಭಾಗೀರಥಿ ಮುರುಳ್ಯ, ತಹಶೀಲ್ದಾರ್ ಪ್ರಭಾಕರ ಖಜೂರೆ, ಕಡತ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರಿದ ಉಪತಹಶೀಲ್ದಾರ್ ಅವರನ್ನು ಆ ಕೆಲಸದಿಂದ ಬಿಡುಗಡೆಗೊಳಿಸಿ, ಬೇರೆ ಅಧಿಕಾರಿಗೆ ಜವಾಬ್ದಾರಿ ವಹಿಸುವುದಾಗಿ ಭರವಸೆ ನೀಡಿದರು.

ಬಳಿಕ ಫಲಾನುಭವಿ ರೈತರು ಪ್ರತಿಭಟನೆಯನ್ನು ಹಿಂಪಡೆದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಾಲಕೃಷ್ಠ ಬಾಣಜಾಲು, ಪಿ.ಪಿ.ವರ್ಗೀಸ್‌, ಕೌಕ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಬ್ರಾಹಿಂ ಎಂ.ಕೆ., ಸದಸ್ಯರಾದ ಮಹೇಶ್, ಜನಾರ್ದನ, ಭವಾನಿ, ಸ್ಥಳೀಯ ಮುಖಂಡರಾದ ತುಕ್ರಪ್ಪ ಶೆಟ್ಟಿ ನೂಜೆ, ಮಹೇಶ್, ನಾರಾಯಣ ಗೌಡ, ಗೋಪಾಲ ಗೌಡ, ಜಾನ್ಸನ್ ಗಲ್ಬಾವು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.