ಮಂಗಳೂರು: ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನರ್ಸಿಂಗ್, ವಾಕ್ ಮತ್ತು ಶ್ರವಣ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವು ಶನಿವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಮಾತನಾಡಿ, ನರ್ಸಿಂಗ್ ವೃತ್ತಿಯು ಹುಟ್ಟಿನಿಂದ ಸಾವಿನವರೆಗಿನ ಜೀವನವನ್ನು ಹತ್ತಿರದಿಂದ ಕಾಣುವ ಪಯಣವಾಗಿದೆ. ಇದನ್ನು ವೃತ್ತಿ ಎನ್ನುವುದಕ್ಕಿಂತ ಸೇವೆ ಎನ್ನುವುದೇ ಹೆಚ್ಚು ಸೂಕ್ತ. ರೋಗಿಗಳಿಗೆ ನೀಡುವ ಆಪ್ತ ಆರೈಕೆ, ಕಾಳಜಿ, ಸಾಂತ್ವನವೇ ಔಷಧದಂತೆ ಪರಿಣಾಮ ಬೀರಬಲ್ಲದು. ಇಂತಹ ಸಾಮರ್ಥ್ಯ ನರ್ಸ್ ಆಗುವವರಲ್ಲಿ ಇರಬೇಕು ಎಂದರು.
ಪದವಿ ಪ್ರದಾನ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್.ಧರ್ಮ, ಜನರು ಆಸ್ಪತ್ರೆಗೆ ಬಂದಾಗ ಚಿಕಿತ್ಸೆಯನ್ನು ಮಾತ್ರ ಬಯಸುವುದಿಲ್ಲ, ಮಾನವೀಯ ಸ್ಪರ್ಶವು ಅವರಲ್ಲಿ ರೋಗಮುಕ್ತವಾಗು ಭರವಸೆ ಮೂಡಿಸುತ್ತದೆ. ರೋಗಿಯೊಂದಿಗೆ ಹೆಚ್ಚಿನ ಸಮಯ ಕಳೆಯುವುದು ವೈದ್ಯರಿಂತ ಹೆಚ್ಚಾಗಿ ನರ್ಸ್ಗಳು. ಅವರು ತಮ್ಮ ಕರುಣೆಯ ಭಾವದ ಮೂಲಕ ರೋಗಿಯ ಮನದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತಾರೆ. ವಿದ್ಯಾರ್ಥಿಗಳು ಈ ವೃತ್ತಿಯ ಪಾವಿತ್ರ್ಯತೆಯನ್ನು ಅರಿತುಕೊಳ್ಳಬೇಕು ಎಂದರು.
ಸಂಸ್ಥೆಯ ನಿರ್ದೇಶಕ ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ನಿಯೋಜಿತ ನಿರ್ದೇಶಕ ಫಾ. ಫಾಸ್ಟಿನ್ ಲುಕಾಸ್ ಲೋಬೊ, ಫಾ. ಅಜಿತ್ ಮಿನೇಜಸ್, ಫಾ. ಜಾರ್ಜ್ ಜೀವನ್ ಸಿಕ್ವೇರಾ, ಡಾ. ಕಿರಣ್ ಶೆಟ್ಟಿ, ಪ್ರೊ. ಧನ್ಯಾ ದೇವಾಸಿಯಾ, ಪ್ರೊ. ಸಿಂಥಿಯಾ ಸಾಂತಮಾರ್, ನ್ಯಾನ್ಸಿ ಮಥಾಯಿಸ್, ಪ್ರೊ. ಆಗ್ನೆಸ್ ಇ.ಜೆ ಉಪಸ್ಥಿತರಿದ್ದರು.
ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ, ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.