ADVERTISEMENT

ಕಸ ಸಮಸ್ಯೆ ಪರಿಹಾರಕ್ಕೆ ದಂಡ ಪ್ರಯೋಗವೇ ಸೂಕ್ತ

ತಾಲ್ಲೂಕು ಮಟ್ಟದ ಸ್ವಚ್ಛೋತ್ಸವ ಪಾಕ್ಷಿಕದಲ್ಲಿ ನೋಡಲ್ ಅಧಿಕಾರಿ ವಿಷ್ಣುಪ್ರಸಾದ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:43 IST
Last Updated 20 ಸೆಪ್ಟೆಂಬರ್ 2025, 5:43 IST
ಪುತ್ತೂರು ತಾಲ್ಲೂಕಿನ ನರಿಮೊಗರು ಗ್ರಾಮ ಪಂಚಾಯಿತಿ ವಠಾರದಲ್ಲಿ ತಾಲ್ಲೂಕು ಮಟ್ಟದ ಸ್ವಚ್ಛೋತ್ಸವ ಪಾಕ್ಷಿಕ ಕಾರ್ಯಕ್ರಮಕ್ಕೆ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಬುಧವಾರ ಚಾಲನೆ ನೀಡಿದರು. ಗ್ರಾ.ಪಂ.ಅಧ್ಯಕ್ಷೆ ಹರಿಣಿ, ಉಪಾಧ್ಯಕ್ಷ ಉಮೇಶ್, ಅಭಿವೃದ್ಧಿ ಅಧಿಕಾರಿ ರವಿಚಂದ್ರ ಮತ್ತಿತರರು ಹಾಜರಿದ್ದರು
ಪುತ್ತೂರು ತಾಲ್ಲೂಕಿನ ನರಿಮೊಗರು ಗ್ರಾಮ ಪಂಚಾಯಿತಿ ವಠಾರದಲ್ಲಿ ತಾಲ್ಲೂಕು ಮಟ್ಟದ ಸ್ವಚ್ಛೋತ್ಸವ ಪಾಕ್ಷಿಕ ಕಾರ್ಯಕ್ರಮಕ್ಕೆ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಬುಧವಾರ ಚಾಲನೆ ನೀಡಿದರು. ಗ್ರಾ.ಪಂ.ಅಧ್ಯಕ್ಷೆ ಹರಿಣಿ, ಉಪಾಧ್ಯಕ್ಷ ಉಮೇಶ್, ಅಭಿವೃದ್ಧಿ ಅಧಿಕಾರಿ ರವಿಚಂದ್ರ ಮತ್ತಿತರರು ಹಾಜರಿದ್ದರು   

ಪುತ್ತೂರು: ‘ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದರೂ ಎಲ್ಲೆಂದರಲ್ಲಿ ಕಸ ಸುರಿಯುವುದು ನಿಂತಿಲ್ಲ. ಹಾಗಾಗಿ ಕಸ ಹಾಕುವವರಿಗೆ ದಂಡ ವಿಧಿಸುವುದೇ ಪರಿಹಾರ ಮಾರ್ಗ’ ಎಂದು ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ವಿಷ್ಣುಪ್ರಸಾದ್ ಹೇಳಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮೀಣ ಸ್ವಚ್ಛ ಭಾರತ ಮಿಷನ್, ನರಿಮೊಗರು ಗ್ರಾಮ ಪಂಚಾಯಿತಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಬುಧವಾರ ಇಲ್ಲಿನ ಗ್ರಾಮ ಪಂಚಾಯಿತಿ ವಠಾರದಲ್ಲಿ ನಡೆದ ‘ಸ್ವಚ್ಛೋತ್ಸವ’ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಸ್ವಚ್ಛತೆಯ ಬಗ್ಗೆ ಅರಿವು ಮೂಡುವಂತಾಗಬೇಕು. ಎಲ್ಲೆಂದರಲ್ಲಿ ಕಸ ಎಸೆಯುವುದು. ನಿರ್ಜನ ಪ್ರದೇಶದಲ್ಲಿ ಕಸ ಸುರಿಯುವುದು ನಡೆಯುತ್ತಲೇ ಇದೆ. ಅಂತಹ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಸ ಎಸೆಯುವ ಜನರಿಗೆ ದಂಡ ವಿಧಿಸಬೇಕು. ಇದಕ್ಕೆ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹರಿಣಿ ಮಾತನಾಡಿ, ಕಳೆದ ಬಾರಿ 10 ದಿನಗಳ ಕಾಲ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಿ ಕೆಲ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದರಿಂದ ಸ್ವಲ್ಪಮಟ್ಟಿಗೆ ಕಸ ಎಸೆಯುವುದು ಕಡಿಮೆಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಯು ಮಾತನಾಡಿ, ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ. ಗ್ರಾಮಸ್ಥರು ಎಲ್ಲೆಂದರಲ್ಲಿ ಕಸ ಎಸೆಯದೆ ಪ್ಲಾಸ್ಟಿಕ್ ಇತರ ಒಣ ಕಸವನ್ನು ನೇರವಾಗಿ ಸ್ವಚ್ಛವಾಹಿನಿಗೆ ನೀಡಬೇಕು. ಸ್ವಚ್ಛತಾ ಪಾಕ್ಷಿಕಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಮೇಶ್, ಸದಸ್ಯರಾದ ನವೀನ್ ರೈ, ತಾರಾನಾಥ, ಪದ್ಮಪ್ಪ, ಪ್ರತಿಮ ರೈ, ಮಲ್ಲಿಕಾ ರೈ, ಸುಧೀರ್ ಕುಮಾರ್, ಪದ್ಮಾವತಿ, ವಸಂತಿ, ಪುಷ್ಪಾವತಿ, ತಾಲ್ಲೂಕು ಪಂಚಾಯಿತಿ ವಿಷಯ ನಿರ್ವಾಹಕರಾದ ಸುರೇಶ್, ರಮೇಶ್, ತುಳಸಿ, ಎನ್ಆರ್‌ಎಲ್‌ಎಂ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಐಇಸಿ ಸಂಯೋಜಕ ಭರತ್ ರಾಜ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷೆ ಸೌಮ್ಯ, ಎಂಬಿಕೆ ಅನುರಾಧ ಪ್ರಭು ಇದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.