ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಸುಮಾರು 360ಕ್ಕೂ ಅಧಿಕ ಆಟೋರಿಕ್ಷಾ ಚಾಲಕರಿಗೆ ಅಕ್ಕಿ ಮತ್ತು ದಿನಸಿ ವಸ್ತುಗಳ ಕಿಟ್ ಅನ್ನು ಕಂಕನಾಡಿ ಬೈಪಾಸ್ ರಿಕ್ಷಾ ನಿಲ್ದಾಣದಲ್ಲಿ ಶಾಸಕ ಐವನ್ ಡಿಸೋಜ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಮತ್ತು ಕಾರ್ಮಿಕ ಇಲಾಖೆಯಿಂದ ರಿಕ್ಷಾ ಚಾಲಕರಿಗೆ ವಿಶೇಷ ಪ್ಯಾಕೇಜ್ ಅನ್ನು ರಾಜ್ಯ ಸರ್ಕಾರ ನೀಡಬೇಕೆಂಬ ಬೇಡಿಕೆಯನ್ನು ಕಾರ್ಮಿಕ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ವಿವರಿಸಲಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ರಿಕ್ಷಾಚಾಲಕರಿಗೆ ಕನಿಷ್ಠ 15 ಕೆ.ಜಿ. ಅಕ್ಕಿ ಮತ್ತು ಎರಡು ಕೆ.ಜಿ. ತೊಗರಿ ಬೇಳೆ ವಿತರಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದು ವಿನಂತಿಸಲಾಗಿದೆ. ಇದಕ್ಕೆ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಶಾಸಕ ಯು.ಟಿ. ಖಾದರ್ ಮಾತನಾಡಿ, ರಿಕ್ಷಾ ಚಾಲಕರಿಗೆ ಅವಶ್ಯಕ ವಸ್ತುಗಳನ್ನು ನೀಡುವ ಐವನ್ ಡಿಸೋಜ ಅವರ ಕಾರ್ಯ ಶ್ಲಾಘನೀಯ. ದುಡಿಯುವ ವರ್ಗಕ್ಕೆ ಆಗಿರುವ ತೊಂದರೆ ನಿವಾರಿಸಲು ಏಲ್ಲರೂ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ಕುಮಾರ್, ಮಾಜಿ ಶಾಸಕ ಜೆ.ಆರ್. ಲೋಬೊ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್ ರೈ, ಪಾಲಿಕೆ ಸದಸ್ಯರಾದ ನವೀನ್ ಡಿಸೋಜ, ಕೇಶವ ಮರೋಳಿ, ಅಬ್ದುಲ್ ರವೂಫ್, ಜೆಸಿಂತಾ ವಿಜಯ ಆಲ್ಫ್ರೆಡ್, ಮಾಜಿ ಸದಸ್ಯರಾದ ನಾಗೇಂದ್ರಕುಮಾರ್, ಸ್ಟೀಫನ್ ಮರೋಳಿ, ಮೊಂತುಲೋಬು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.