ADVERTISEMENT

ಮಾಜಿ ಶಾಸಕ ಕೆ.ರಾಮ ಭಟ್ ನಿಧನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 15:32 IST
Last Updated 6 ಡಿಸೆಂಬರ್ 2021, 15:32 IST
ಕೆ.ರಾಮ ಭಟ್
ಕೆ.ರಾಮ ಭಟ್   

ಪುತ್ತೂರು: ಅವಿಭಜಿತ ಜಿಲ್ಲೆಯ ‘ಬಿಜೆಪಿಯ ಭೀಷ್ಮ’ ಎಂದೇ ಕರೆಯಲಾಗುತ್ತಿದ್ದ, ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ.ರಾಮ ಭಟ್ (92) ವಯೋ ಸಹಜ ಅನಾರೋಗ್ಯದಿಂದಾಗಿ ಸೋಮವಾರ ಸಂಜೆ ನಗರದ ಕೊಂಬೆಟ್ಟಿನ ತಮ್ಮ ಮನೆಯಲ್ಲಿ ನಿಧನರಾದರು.

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ 7ಬಾರಿ ಸ್ಪರ್ಥಿಸಿದ್ದ ರಾಮ ಭಟ್ ಅವರು, 1977 ಮತ್ತು 1983ರಲ್ಲಿ ಗೆಲುವು ಸಾಧಿಸಿದ್ದರು. 1957ರಲ್ಲಿ ಮೊದಲ ಬಾರಿಗೆ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, 1985ರಲ್ಲಿ ಕೊನೆಯ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಜನಸಂಘ ಮತ್ತು ಆ ಬಳಿಕ ಬಿಜೆಪಿಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಮ ಭಟ್ ಅವರು ಹಲವು ನಾಯಕರನ್ನು ಬೆಳೆಸಿದ್ದರು.

ಪ್ರೌಢಶಿಕ್ಷಣದ ವಿದ್ಯಾರ್ಥಿ ದೆಸೆಯಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದವರು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ರಾಷ್ಟ್ರ ಮಟ್ಟದ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರೇ ರಾಮ ಭಟ್ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.

ADVERTISEMENT

ಅವರಿಗೆ ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಮಂಗಳವಾರ ಬೆಳಿಗ್ಗೆ ಪುತ್ತೂರಿನ ಹಿಂದೂ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.