ADVERTISEMENT

ಉಳ್ಳಾಲ: ಮುನ್ನೂರು ಗ್ರಾ.ಪಂಗೆ ‘ಗಾಂಧಿ ಗ್ರಾಮ’ದ ಗರಿ

ಸ್ವಚ್ಛ ಭಾರತ ಯೋಜನೆಯ ಸಮರ್ಪಕ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 15:02 IST
Last Updated 30 ಸೆಪ್ಟೆಂಬರ್ 2020, 15:02 IST
ಮುನ್ನೂರು ಗ್ರಾಮ ಪಂಚಾಯಿತಿ ಕಚೇರಿ
ಮುನ್ನೂರು ಗ್ರಾಮ ಪಂಚಾಯಿತಿ ಕಚೇರಿ   

ಉಳ್ಳಾಲ: ಮಂಗಳೂರು ತಾಲ್ಲೂಕಿನ ಮುನ್ನೂರು ಗ್ರಾಮ ಪಂಚಾಯಿತಿಯು ’ಗಾಂಧಿ ಗ್ರಾಮ ಪುರಸ್ಕಾರ‘ಕ್ಕೆ ಆಯ್ಕೆಯಾಗಿದೆ.

ಪ್ರಶಸ್ತಿಗೆ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ 7 ಗ್ರಾಮ ಪಂಚಾಯಿತಿಗಳ ಪೈಕಿ ಮುನ್ನೂರು ಪಂಚಾಯಿತಿಯೂ ಸೇರಿರುವುದು ಸದಸ್ಯರಿಗೆ, ಗ್ರಾಮಸ್ಥರಿಗೆ ಹೆಮ್ಮೆಯನ್ನು ತಂದಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೊಂಡ ಸಂಪನ್ಮೂಲ ಸದ್ಬಳಕೆ ಕಾರ್ಯಕ್ರಮಗಳು, ಮಕ್ಕಳ ಮತ್ತು ಮಹಿಳಾ ಗ್ರಾಮ ಸಭೆ, ಜನಸ್ನೇಹಿ ಆಡಳಿತ, ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಈ ಪುರಸ್ಕಾರದ ಗರಿ ಲಭಿಸಿದೆ.

ADVERTISEMENT

’ಗ್ರಾಮಸ್ಥರು, ಆಡಳಿತ ಮಂಡಳಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರ ಸಾಂಘಿಕ ಪ್ರಯತ್ನದಿಂದ ಈ ಪ್ರಶಸ್ತಿ ಲಭಿಸಿದೆ‘ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜೀವ ನಾಯ್ಕ್ ಹೇಳಿದರು.

ಪಂಚಾಯತ್ ವಿಕೇಂದ್ರೀಕರಣದ ಸಂದರ್ಭದಲ್ಲಿ ಈ ಗ್ರಾಮದ ಹತ್ತಿರದ ಅಂಬ್ಲಮೊಗರು ಪೆರ್ಮನ್ನೂರು ಸೇರಿ ಪೆರ್ಮನ್ನೂರು ಮಂಡಲ ಪಂಚಾಯತಿ ಆಗಿತ್ತು. ಗ್ರಾಮ ಪಂಚಾಯತಿ ಅಸ್ತಿತ್ವಕ್ಕೆ ಬಂದು ಗಡಿ ಗುರುತಿಸಲಾಗಿ, ಮುನ್ನೂರಾಯರು ನೆಲಿಸಿದ ಭಾಗ ಗಡಿಯೊಳಗೆ ಬರುವ ಊರನ್ನು ಮುನ್ನೂರು ಗ್ರಾಮವೆಂದು ನಾಮಕರಣ ಮಾಡಲಾಗಿದೆ.

ಮುನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 10 ಜನವಸತಿ ಪ್ರದೇಶಗಳಿವೆ. ಗ್ರಾಮದಲ್ಲಿ ಒಟ್ಟು 43 ಸ್ವಸಹಾಯ ಸ್ತ್ರೀ ಶಕ್ತಿ ಗುಂಪುಗಳಿವೆ. ಗ್ರಾಮದಲ್ಲಿ ಒಟ್ಟು 7 ಅಂಗನವಾಡಿಗಳಿದ್ದು, 6 ಅಂಗನವಾಡಿಗಳು ಸ್ವಂತ ಕಟ್ಟಡ ಹೊಂದಿವೆ. ಪ್ರಾಥಮಿಕ ಆರೋಗ್ಯ ಉಪಕೇಂದ್ರವೂ ಸ್ವಂತ ಕಟ್ಟಡ ಹೊಂದಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದೆ.

ಪಂಚಾಯತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕವಿದೆ. ಪ್ರತಿ ಮನೆಯಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಲಾಗುತ್ತದೆ. ಕಸದಿಂದ ಗೊಬ್ಬರ ತಯಾರಿಸಲಾಗುತ್ತದೆ. ಪಂಚಾಯಿತಿ ಮಟ್ಟದಲ್ಲಿ ಸುಸಜ್ಜಿತ ಸಮುದಾಯ ಭವನ ಕಟ್ಟಡವಿದ್ದು, ಇದನ್ನು ಪಂಚಾಯಿತಿ ಮಟ್ಟದ ಸಭೆಗಳು ನಡೆಯುತ್ತವೆ. ಸಾರ್ವಜನಿಕರಿಗೆ ಬಾಡಿಗೆ ರೂಪದಲ್ಲೂ ನೀಡಲಾಗುತ್ತಿದೆ.

ಗ್ರಾಮ ಪಂಚಾಯಿತಿಯಲ್ಲಿ ನಗದು ರಹಿತ ವಹಿವಾಟು ಪ್ರೋತ್ಸಾಹಿಸಲು ಗೂಗಲ್ ಪೇ ಸೇರಿದಂತೆ ಆನ್‌ಲೈನ್‌ ಮೂಲಕ ತೆರಿಗೆ ಪಾವತಿಸುವ ಸೌಲಭ್ಯ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.