ADVERTISEMENT

ಗ್ಯಾರೇಜ್‌ ಮಾಲಕರ, ನೌಕರರ ಸಮಾವೇಶ 30ರಂದು

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 10:20 IST
Last Updated 27 ಜನವರಿ 2023, 10:20 IST
ಸುದ್ದಿಗೋಷ್ಠಿಯಲ್ಲಿ ಪುರುಷೋತ್ತಮ ಕಮಿಲ ಮಾತನಾಡಿದರು. ರೊನಾಲ್ಡ್‌ ಜಯಕರ್‌ ಸೋನ್ಸ್‌, ಜರ್ನಾರ್ಧನ ಅತ್ತಾವರ, ಕೇಶವ ಹಾಗೂ ದಿವಾಕರ ಇದ್ದಾರೆ
ಸುದ್ದಿಗೋಷ್ಠಿಯಲ್ಲಿ ಪುರುಷೋತ್ತಮ ಕಮಿಲ ಮಾತನಾಡಿದರು. ರೊನಾಲ್ಡ್‌ ಜಯಕರ್‌ ಸೋನ್ಸ್‌, ಜರ್ನಾರ್ಧನ ಅತ್ತಾವರ, ಕೇಶವ ಹಾಗೂ ದಿವಾಕರ ಇದ್ದಾರೆ   

ಮಂಗಳೂರು: ದಕ್ಷಿಣ ಕನ್ನಡ ಗ್ಯಾರೇಜ್‌ ಮಾಲಕರ ಸಂಘದ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ಯಾರೇಜ್‌ ಮಾಲಕರ ಹಾಗೂ ನೌಕರರ ಮಹಾ ಸಮಾವೇಶವನ್ನು ಇದೇ 30ರಂದು ಇಲ್ಲಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಏರ್ಪಡಿಸಲಾಗಿದೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕಮಿಲ, ‘ಗ್ರಾಹಕ– ಕಾರ್ಮಿಕ ಹಾಗೂ ಮಾಲಕರ ಬಾಂಧವ್ಯ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು, ಕಾರ್ಮಿಕರ ಆರೋಗ್ಯ ಸುರಕ್ಷತೆ, ಕಾರ್ಮಿಕ ಕಾನೂನು ಕುರಿತು ಕಾರ್ಮಿಕರಿಗೆ ವಿಶೇಷ ಉಪನ್ಯಾಸವು ಮೂಡಿಸಲು ಈ ಸಮಾವೇಶ ಏರ್ಪಡಿಸಲಾಗಿದೆ. ಸುಮಾರು 6 ಸಾವಿರ ಕಾರ್ಮಿಕರು ಭಾಗವಹಿಸಲಿದ್ದಾರೆ’ ಎಂದರು.

‘ಸಮಾವೇಶಕ್ಕೂ ಮುನ್ನ ಬಲ್ಮಠದ ಯುಬಿಎಂ ಮೈದಾನದಿಂದ ಪುರಭವನದವರೆಗೆ ಜಾಥಾ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಹಾಗೂ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಬೆಳಿಗ್ಗೆ 9.30ಕ್ಕೆ ಉದ್ಘಾಟಿಸುವರು. ಮಹಾ ಸಮಾವೇಶವನ್ನು ಕಾರ್ಮಿಕ ಸಚಿವ ಎ.ಶಿವರಾಮ್‌ ಹೆಬ್ಬಾರ್‌ ಬೆಳಿಗ್ಗೆ 10.30ಕ್ಕೆ ಉದ್ಘಾಟಿಸುವರು. ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸುವರು. ಗ್ಯಾರೇಜ್ ಮಾಲೀಕರ ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂಜೆ 3ರಿಂದ ಸಮಾಲೋಚನೆ ಸಭೆ ನಡೆಯಲಿದ್ದು, ಕೆಲವೊಂದು ನಿರ್ಣಯ ಕೈಗೊಳ್ಳಲಿದ್ದೇವೆ‘ ಎಂದರು.

ADVERTISEMENT

‘ಇ–ವಾಹನಗಳ ಬಳಕೆ ಹೆಚ್ಚಿದರೂ ಗ್ಯಾರೇಜ್‌ಗಳ ಬೇಡಿಕೆ ಕುಸಿಯದು. ವಾಹನದ ಎಂಜಿನ್‌ ಹಾಗೂ ಇಂಧನ ಬದಲಾದರೂ ಇತರ ಕೆಲವು ಬಿಡಿಭಾಗಗಳ ನಿರ್ಹವಣೆಗೆ ಎಂದಿನಂತೆಯೇ ಬೇಡಿಕೆ ಮುಂದುವರಿಯಲಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೇಶವ, ಗೌರವಾಧ್ಯಕ್ಷ ಜರ್ನಾರ್ಧನ ಅತ್ತಾವರ, ಗ್ಯಾರೇಜ್‌ ಮಾಲೀಕರ ಸೌಹಾರ್ದ ಸಹಕಾರಿ ಸಂಘದ ರೊನಾಲ್ಡ್‌ ಜಯಕರ್‌ ಸೋನ್ಸ್‌, ದಿವಾಕರ ಹಾಗೂ ಕುಡುಪು ವಾಸುದೇವ ರಾವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.