ಮಂಗಳೂರು: ಯಾವ ಧರ್ಮವೂ ದ್ವೇಷ ಸಾರುವುದಿಲ್ಲ. ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿದ್ದು, ಧರ್ಮಗಳ ಬಗೆಗಿನ ಅಪನಂಬಿಕೆ ಹೋಗಲಾಡಿಸಲು ಅಂತರ ಧರ್ಮೀಯ ಸಂವಾದ ನಡೆಯುತ್ತಿರಬೇಕು ಎಂದು ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೆ ಹೇಳಿದರು.
ಶುಕ್ರವಾರ ನಗರದ ಕಂಕನಾಡಿಯ ಬಾಲಿಕಾಶ್ರಮ ರಸ್ತೆಯ ಬಳಿ ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ನ ಬ್ರಹ್ಮಾವರ ಧರ್ಮ ಪ್ರಾಂತ್ಯದ ವತಿಯಿಂದ ನಿರ್ಮಿಸಿರುವ ಧರ್ಮಾಧ್ಯಕ್ಷರ ನಿವಾಸ ಮತ್ತು ಪ್ರಾರ್ಥನಾ ಮಂದಿರದ ಉದ್ಘಾಟನೆ ಹಾಗೂ ಆಶೀರ್ವಚನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಸಭೆಯ ನೂತನ ಪರಮಾಧ್ಯಕ್ಷ ಮಾರ್ ಬಸೆಲಿಯೋಸ್ ಮಾರ್ಥೋಮಾ ಮ್ಯಾಥ್ಯೂಸ್ ತೃತೀಯ ಆಶೀರ್ವಚನ ನೀಡಿದರು.
ಬ್ರಹ್ಮಾವರ ಧರ್ಮ ಪ್ರಾಂತ್ಯದ ಬಿಷಪ್ ರೆ.ಯಾಕೋಬ್ ಮಾರ್ ಎಲಿಯಾಸ್ ಮೆಟ್ರೋಪೋಲಿಟನ್ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ ಬಸಲಿಯೋಸ್ ಮಾರ್ಥೋಮಾ ಮಾಥ್ಯೂಸ್ ತೃತೀಯ ಅವರನ್ನು ಮಂಗಳೂರು ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ಡಾನ ಅವರು ಶಾಲು ಹೊದಿಸಿ ಅಭಿನಂದಿಸಿದರು. ಬಸಲಿಯೋಸ್ ಮಾರ್ಥೋಮಾ ಮಾಥ್ಯೂಸ್ ಅವರ ಮಂಗಳೂರು ಭೇಟಿಯು ಸಂಬಂಧವನ್ನು ಮತ್ತಷ್ಟು ಬಲಗೊಳಿಸಿದೆ ಎಂದರು.
ಬೆಳ್ತಂಗಡಿಯ ಬಿಷಪ್ ರೆ.ಡಾ. ಲಾರೆನ್ಸ್ ಮುಕ್ಕುಝಿ, ಪುತ್ತೂರು ಬಿಷಪ್ ರೆ.ಡಾ. ಗೀವರ್ಗೀಸ್ ಮಾರ್ ಮಕರಿಯೋಸ್, ಚೆನ್ನೈ ಬಿಷಪ್ ರೆ.ಡಾ. ಯುಹನಾನ್ ಮಾರ್ ಡಯಾಸ್ಕೊರೊಸ್, ಮಲಬಾರ್ ಧರ್ಮ ಪ್ರಾಂತ್ಯದ ಕಾರ್ಯದರ್ಶಿ ರೆ.ತೋಮಸ್ ಕುರಿಯನ್ ತಝಯಿಲ್, ಆರ್ಥೊಡಾಕ್ಸ್ ಸಭೆಯ ಕಾರ್ಯದರ್ಶಿ ಬಿಜು ಊಮ್ಮನ್, ಬ್ರಹ್ಮಾವರದ ಗುರು ವಂ. ಲಾರೆನ್ಸ್ ಡಿಸೋಜ ಅವರು ಪರಮಾಧ್ಯಕ್ಷರನ್ನು ಅಭಿನಂದಿಸಿದರು.
ಆಶೀರ್ವಚನ ನೀಡಿದ ಬಸಲಿಯೋಸ್ ಮಾರ್ಥೋಮಾ ಮಾಥ್ಯೂಸ್ ತೃತೀಯ ಅವರು, ಮಂಗಳೂರು ಕೇಂದ್ರದ ಮೂಲಕ ಸೇವಾ ಕಾರ್ಯಗಳು ನಡೆದು ಜನರ ಪ್ರೀತಿಗೆ ಪಾತ್ರವಾಗಲಿ ಎಂದು ಆಶಿಸಿದರು. ಆರ್ಥೊಡಾಕ್ಸ್ ಸಭೆಯ ಬಿಷಪರಾದ ರೆ.ಕುರಿಯಾಕೋಸ್ ಮಾರ್ ಕ್ಲೆಮಿಸ್, ರೆ.ಝಕಾರಿಯಾ ಮಾರ್ ಅಂತೋನಿಯೋಸ್, ರೆ. ಯುಹನಾನ್ ಮಾರ್ ಪೊಲಿಕಾರ್ಪೊಸ್, ಅತಿ ವಂ. ಅಬ್ರಹಾಂ ಮಾರ್ ಎಪಿಫನಿಯೋಸ್, ಅತಿ ವಂ. ಡಾ.ಗೀವರ್ಗೀಸ್ ಮಾರ್ ಯುಲಿಯಾಸ್, ರೆ.ಡಾ.ಅಬ್ರಹಾಂ ಮಾರ್ ಸೆರಫಿಮ್, ರೆ.ಯುಹಾನಾನ್ ಮಾರ್ ಡಿಮಿಟ್ರಿಯೋಸ್ ವೇದಿಕೆಯಲ್ಲಿದ್ದರು.
ಮಾಜಿ ಶಾಸಕ ಜೆ.ಆರ್. ಲೋಬೊ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಪಾಲಿಕೆ ಸದಸ್ಯ ನವೀನ್ ಡಿಸೋಜ ಭಾಗವಹಿಸಿದ್ದರು. ಧರ್ಮ ಪ್ರಾಂತ್ಯದ ಕಾರ್ಯದರ್ಶಿ ರೆ.ಕುರಿಯಾಕೋಸ್ ತೋಮಸ್ ಪಳ್ಳಿಚಿರ ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ ಜಾನ್ಸನ್ ಕಟ್ಟೂರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.