ADVERTISEMENT

ರಂಗಕರ್ಮಿ ಗುರುಮೂರ್ತಿಗೆ ಕಾರಂತ ಯುವ ಪ್ರಶಸ್ತಿ

ನಾಟ್ಕದೂರಿನಲ್ಲಿ 26ರಿಂದ ಅಕ್ಟೋಬರ್‌ 6ರ ವರೆಗೆ ಅವ್ವ ನನ್ನವ್ವ ರಂಗೋತ್ಸವ; ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 11:07 IST
Last Updated 21 ಸೆಪ್ಟೆಂಬರ್ 2022, 11:07 IST
ಕೃಷ್ಣಪ್ರಸಾದ್
ಕೃಷ್ಣಪ್ರಸಾದ್   

ಹೆಬ್ರಿ: ಉತ್ತರಕನ್ನಡ ಜಿಲ್ಲೆಯ ರಂಗ ನಟ, ನಿರ್ದೇಶಕ ಗುರುಮೂರ್ತಿ ವಿಎಸ್‌ ಅವರುಮುದ್ರಾಡಿ ನಾಟ್ಕದೂರು ನಮ ತುಳುವೆರ್‌ ಕಲಾ ಸಂಘಟನೆಯ ಬಿ.ವಿ.ಕಾರಂತ ಯುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನವದೆಹಲಿಯಸಂಸ್ಕೃತಿ ಇಲಾಖೆ, ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ 22ನೇ ವರ್ಷದ ನವರಂಗೋತ್ಸವ ಮತ್ತು ನಾಟ್ಕ ಮುದ್ರಾಡಿಯ 37ನೇ ಸಂಭ್ರಮ ಅವ್ವ ನನ್ನವ್ವ ರಂಗೋತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಸಂಘಟನೆಯ ಅಧ್ಯಕ್ಷ ಸುಕುಮಾರ್‌ ಮೋಹನ್‌ ತಿಳಿಸಿದ್ದಾರೆ.

ಭಾಗವತ ಪಟ್ಲ ಸತೀಶ ಶೆಟ್ಟಿ, ಬಿಲ್ಲವ ಮಹಾ ಮಂಡಳದ ಅಧ್ಯಕ್ಷ ರಾಜಶೇಖರ ಕೋಟ್ಯಾನ್‌, ಉದ್ಯಮಿ ಮೂಡುಬಿದರೆಯ ತಿಮ್ಮಯ್ಯ ಶೆಟ್ಟಿ, ಉಡುಪಿ ಪ್ರಸಾದ್‌ ನೇತ್ರಾಲಯದ ಡಾ.ಕೃಷ್ಣ ಪ್ರಸಾದ್‌, ಉದ್ಯಮಿ ಸುಗುಣ ಶಂಕರ್‌ ಉಡುಪಿ, ಉದ್ಯಮಿ ಪ್ರವೀಣ್‌ ಜತ್ತನ್‌, ದೊಂಡೆರಂಗಡಿ ಪಂಚಮಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಪೂನಾ ಪುರಂದರ ಪೂಜಾರಿ ಅವರಿಗೆ ಕರ್ಣಾಟ ನಾಡ ಪೋಷಕ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಅವರು ವಿರಿಸಿದ್ದಾರೆ.

ADVERTISEMENT

9 ದಿನ ನಡೆಲಿರುವ ಕಾರ್ಯಕ್ರಮಗಳಲ್ಲಿ ನಾಟಕ, ಯಕ್ಷಗಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ರಂಗೋತ್ಸವವನ್ನು ಉದ್ಘಾಟಿಸುವರು. ರಾಜ್ಯ ಗಣಿ ಮತ್ತು ಕ್ರಷರ್‌ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷತೆ ವಹಿಸುವರು. ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ಉಡುಪಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮುದ್ರಾಡಿ ದಿವಾಕರ ಎನ್‌ ಶೆಟ್ಟಿ, ವಾಸ್ತು ತಜ್ಞ ಪ್ರಮಲ್‌ ಕುಮಾರ್‌ ಕಾರ್ಕಳ, ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಮುದ್ರಾಡಿ ಪಾಲ್ಗೊಳ್ಳುವರು ಎಂದು ಹೇಳಿದ್ದಾರೆ.

ಅಭಯಹಸ್ತೆ ಆದಿಶಕ್ತಿ ದೇವಸ್ಥಾನದಲ್ಲಿ ದಸರಾ

ಹೆಬ್ರಿ: ಮುದ್ರಾಡಿ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ದೇವಸ್ಥಾನದಲ್ಲಿ ಇದೇ 25ರಿಂದ ಅಕ್ಟೋಬರ್‌ 6ರ ವರೆಗೆ 51ನೇ ವರ್ಷದ ದಸರಾ ಮಹೋತ್ಸವ, ದುರ್ಗಾ ಹೋಮ ಹಾಗೂ ಚಂಡಿಕಾ ಹೋಮ ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಬ್ರಹ್ಮಶ್ರೀ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ನೇತ್ರತ್ವದಲ್ಲಿ ನಡೆಯಲಿದ್ದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ ಎಂದು ಕ್ಷೇತ್ರದ ಧರ್ಮಾಧಿಕಾರಿ ಸುಕುಮಾರ್‌ ಮೋಹನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.