ಉಪ್ಪಿನಂಗಡಿ: ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗಿ 2 ತಿಂಗಳ ಬಳಿಕ ನಿರಂತರವಾಗಿ ಭಾರಿ ಮಳೆಯಾದರೆ ಉಪ್ಪಿನಂಗಡಿಯಲ್ಲಿ ನದಿ ತುಂಬಿ ಹರಿಯುವುದು, ಸಂಗಮವಾಗುವುದು ವಾಡಿಕೆ. ಆದರೆ, ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯಿಂದಾಗಿ ಇಲ್ಲಿನ ಹೆದ್ದಾರಿ ಬದಿಯಲ್ಲಿದ್ದ ದೊಡ್ಡ ತೋಡು ಮುಚ್ಚಿಹೋಗಿದ್ದು, ಮಳೆಗಾಲ ಪ್ರಾರಂಭ ಆಗುತ್ತಿದ್ದಂತೆ ನೆರೆ ಉಂಟಾಗುವ ಭೀತಿ ಸ್ಥಳೀಯರಲ್ಲಿ ಮೂಡಿದೆ.
ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಿರ್ವಹಿಸುತ್ತಿರುವವರ ಅವೈಜ್ಞಾನಿಕ ನಿರ್ವಹಣೆಯ ಕಾರಣದಿಂದ ತೋಡು ಮುಚ್ಚಿಹೋಗಿದೆ. ನಟ್ಟಿಬೈಲ್, ರಾಮನಗರ, ಕುರ್ಪೇಲು ಪ್ರದೇಶದ ಮಳೆ ನೀರು ಈ ತೋಡಿನ ಮೂಲಕ ಹರಿದು ಕುಮಾರಧಾರಾ ನದಿ ಸೇರುತ್ತಿತ್ತು. ಆದರೆ, ಈಗ ಇಲ್ಲಿ ಮೋರಿ ಜೋಡಿಸಿಲ್ಲ. ಕಾಮಗಾರಿ ಅರ್ಧದಲ್ಲಿ ನಿಂತಿದೆ.
ಹೆದ್ದಾರಿಯ ಇನ್ನೊಂದು ಭಾಗದಲ್ಲಿರುವ ಉಪ್ಪಿನಂಗಡಿ ಪೇಟೆ, ಗಾಂಧಿಪಾರ್ಕ್, ಸೂರಪ್ಪ ಕಾಂಪೌಂಡ್ ಪರಿಸರದ ನೀರು ಸರ್ಕಾರಿ ಮಾದರಿ ಶಾಲಾ ಹಿಂಭಾಗದ ತೋಡಿನ ಮೂಲಕ ಹೆದ್ದಾರಿಯ ಅಡಿಯಲ್ಲಿ ಅಳವಡಿಸಿರುವ ಮೋರಿಗೆ ಕವಲೊಡೆದು ಕುಮಾರಧಾರಾ ಸೇರುತ್ತಿತ್ತು. ಹೆದ್ದಾರಿ ಬದಿಯಲ್ಲಿ ಮೋರಿ ನಿರ್ಮಿಸಿದ್ದರೂ ಈ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದಾಗಿ ಮಳೆ ನೀರು ಸರಾಗವಾಗಿ ಹರಿದು ನದಿ ಸೇರದೆ ಪೇಟೆಯೊಳಗೆ ನುಗ್ಗುವ ಭಯ ಉಂಟಾಗಿದೆ.
ರಾಜಕಾಲುವೆ ಬಂದ್, ನೀರು ಹೋಗಲು ಹಾದಿಯೇ ಇಲ್ಲ: ಪೇಟೆಯೊಳಗಿನ ಮೋರಿಗಳಿಗೆ ಪಂಚಾಯಿತಿ ವತಿಯಿಂದ ಕೆಲವು ಕಡೆ ಮಾತ್ರ ಸ್ಲ್ಯಾಬ್ ಅಳವಡಿಸಲಾಗಿದೆ. ಆದರೂ 2 ಕಡೆ ಚೇಂಬರ್ ಕಾಮಗಾರಿ ಅರ್ಧದಲ್ಲಿ ನಿಂತಿದ್ದು, ಈ ಕಾರಣದಿಂದ ಹೂಳೆತ್ತಿಲ್ಲ. ಪೇಟೆಯೊಳಗಿನ ನೀರು ಸೂರಪ್ಪ ಕಾಂಪೌಂಡ್ ಬಳಿ ತೋಡಿನ ಮೂಲಕ ಬಂದು ಉಲ್ಲಾಸ್ ಬಾರ್ ಹಿಂಭಾಗದಲ್ಲಿ ರಾಜಕಾಲುವೆ ಮೂಲಕ ಕುಮಾರಧಾರಾ ಸೇರುವಂತಿತ್ತು. ಆದರೆ, ರಾಜಕಾಲುವೆ ಬಳಿಯಲ್ಲಿ ಹೆದ್ದಾರಿಯವರು ತಡೆಗೋಡೆ ನಿರ್ಮಿಸಿರುವುದರಿಂದ ಕಾಲುವೆ ಬಂದ್ ಆಗಿದೆ. ಹೀಗಾಗಿ ಈ ನೀರು ಯಾವ ಕಡೆಗೆ ಹರಿಯುತ್ತದೆ ಎಂಬುದೇ ತಿಳಿಯದಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ಕ್ರಮ ಕೈಗೊಳ್ಳಿ: ಶಾಸಕ ಅಶೋಕ್ ಕುಮಾರ್ ಅವರ ಚಿಂತನೆಯಂತೆ ಸಂಗಮ ಕ್ಷೇತ್ರ ಕೂಡಲ ಸಂಗಮದ ರೀತಿಯಲ್ಲಿ ಅಭಿವೃದ್ಧಿಗೆ ಅಣಿಯಾಗುತ್ತಿದೆ. ಇದೀಗ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯೂ ಅಧಿಕವಾಗುತ್ತಿದೆ. ಹೀಗಿರುವಾಗಿ ಇಲ್ಲಿ ಸಮಸ್ಯೆ ಉಂಟಾಗಿ ಭಕ್ತರು ಸಂಕಷ್ಟಪಡುವುದು ಶೋಭೆಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು ಎಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಎ.ಕೃಷ್ಣ ರಾವ್ ಅರ್ತಿಲ ಹೇಳಿದರು.
ಹೂಳೆತ್ತುವ ಕೆಲಸ ಶೀಘ್ರ: ಈಗಾಗಲೇ ಪಂಚಾಯಿತಿಯಲ್ಲಿ ಸಭೆ ನಡೆಸಲಾಗಿದ್ದು, ಹೂಳೆತ್ತುವ ಬಗ್ಗೆ ಚರ್ಚಿಸಲಾಗಿದೆ. ಶೀಘ್ರವಾಗಿ ಕೆಲಸ ಆರಂಭಿಸಲಾಗುವುದು. ಪೇಟೆಯಿಂದ ಹೋಗುವ ಮಳೆ ನೀರು ರಾಜಕಾಲುವೆ ಮೂಲಕ ನದಿ ಸೇರುವುದಕ್ಕೆ ಹೆದ್ದಾರಿ ಕಾಮಗಾರಿಯವರಿಂದ ತಡೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರವನ್ನು ಹೆದ್ದಾರಿ ಇಲಾಖೆಯವರು ಮಾಡಬೇಕಾಗಿದೆ. ನಮ್ಮ ಕಡೆಯಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎನ್ನುತ್ತಾರೆ ಉಪ್ಪಿನಂಗಡಿ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರಾಡ್ರಿಗಸ್.
ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ: ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳ ಕ್ರಮಕೈಗೊಳ್ಳುವ ಸಲುವಾಗಿ ಎಲ್ಲೆಲ್ಲಿ ಏನೇನು ತೊಡಕುಗಳಿವೆ ಎಂದು ವರದಿ ನೀಡಬೇಕು. ಅವುಗಳನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಗೆ ಈಗಾಗಲೇ ಲಿಖಿತವಾಗಿ ಸೂಚನೆ ನೀಡಲಾಗಿದೆ. ಸಮಸ್ಯೆಗಳು ಮಳೆಗಾಲ ಆರಂಭಕ್ಕೆ ಮುನ್ನ ಸರಿಯಾಗಲಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೈಟ್ ಎಂಜಿನಿಯರ್ ನವೀನ್ ತಿಳಿಸಿದರು.
ಮಳೆ ನೀರು ಸರಾಗವಾಗಿ ಹರಿದು ಹೋಗಲು ತೊಡಕು ಮುಚ್ಚಿಕೊಂಡಿರುವ ತೋಡು, ರಾಜಕಾಲುವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.