ADVERTISEMENT

ಹೆಜ್ಜೇನು ದಾಳಿ: ಬಾವಿಯಲ್ಲಿ ಅವಿತ ವೃದ್ಧ– ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 12:34 IST
Last Updated 30 ಮಾರ್ಚ್ 2023, 12:34 IST

ಉಳ್ಳಾಲ (ದಕ್ಷಿಣ ಕನ್ನಡ): ಉಳ್ಳಾಲ ತಾಲ್ಲೂಕಿನ ನರಿಂಗಾನ ಗ್ರಾಮದ ಬೋಳ ಎಂಬಲ್ಲಿ ಹೆಜ್ಜೇನು ದಾಳಿಯಿಂದ ನಾಲ್ವರು ಗಾಯಗೊಂಡಿದ್ದಾರೆ. ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು 79ರ ವೃದ್ಧರೊಬ್ಬರು ಬಾವಿಗಿಳಿದು ಅವಿತುಕೊಂಡಿದ್ದಾರೆ.

ನರಿಂಗಾನ‌ ಗ್ರಾಮದ ಬೋಳ ನಿವಾಸಿ ರಾಬರ್ಟ್ ಕುಟಿನ್ಹೊ ಬಾವಿಗಿಳಿದು ಪಾರಾದ ವೃದ್ಧ. ಅವರ ಮಗ ರಾಯಲ್ ಕುಟಿನ್ಹೊ (39) ಹೆಜ್ಜೇನು ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ. ರಾಯಲ್‌ ಅವರ ಸಹೋದರ ಜೋಸೆಫ್ ಕುಟಿನ್ಹೊ ಅವರಿಗೂ ಗಾಯಗಳಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ. ಜೋಸೆಫ್ ಕುಟಿನ್ಹೊ ಅವರ ಮಗ ಅಖಿಲ್ ಅವರಿಗೂ ಹೆಜ್ಜೇನುಗಳು ಕಡಿದಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಾಬರ್ಟ್ ಕುಟಿನ್ಹೊ ಅವರು ಬೆಳಗ್ಗೆ ಒಣಗಿದ ಬಟ್ಟೆ ತೆಗೆಯಲೆಂದು ಮನೆಯ ಮಹಡಿ ಹತ್ತುವಾಗ ಜೇನುಗಳು ದಾಳಿ ನಡೆಸಿದ್ದವು. ಅವರು ರಕ್ಷಣೆಗಾಗಿ ಕೂಗಿಕೊಂಡಾಗ ಮಗ ರಾಯಲ್ ಅವರೂ ಸ್ಥಳಕ್ಕೆ ಧಾವಿಸಿದ್ದರು. ಮಗನ‌ ಸಹಾಯದಿಂದ ಮಹಡಿಯಿಂದ ಇಳಿದ ರಾಬರ್ಟ್‌ ಅವರನ್ನು ಜೇನ್ನೊಣಗಳು ಹಿಂಬಾಲಿಸಿ ಕಡಿಯುತ್ತಿದ್ದವು. ಹೆಜ್ಜೇನು ಬೆನ್ನಟ್ಟಿದಾಗ ಬೇರೆ ದಾರಿ‌ಕಾಣದೆ ಅವರು ಸಮೀಪದ ಬಾವಿಗೆ ಇಳಿದು ನೀರಿನಲ್ಲಿ ಮುಳುಗಿ ಅವಿತುಕೊಂಡಿದ್ದರು. ಸುಮಾರು ಹೊತ್ತಿನ ಬಳಿಕ ಮೇಲೆದ್ದು ಬಂದಿದ್ದರು. ಅವರಿಗೆ ಸುಮಾರು 100ಕ್ಕೂ ಹೆಚ್ಚು ಜೇನ್ನೊಣಗಳು ಕಡಿದಿವೆ. ರಾಯಲ್ ಅವರಿಗೆ ಜೇಣ್ನೊಣಗಳ ಕಡಿತದಿಂದ 22 ಕಡೆ ಗಾಯಗಳಾಗಿದ್ದು, ಮುಖ ಊದಿಕೊಂಡಿದೆ.

ADVERTISEMENT

ರಾಯಲ್ ಅವರ ಪತ್ನಿ ಹಾಗೂ ಮಗು ಮನೆಯ ಸಿಟ್ ಔಟ್ ನಲ್ಲಿ ಕುಳಿತುಕೊಂಡಿದ್ದರು. ಮನೆ ಮಂದಿ ಎಚ್ಚರಿಸಿದ್ದರಿಂದ ಅವರು ಕೊಠಡಿಯೊಳಗೆ ಸೇರಿಕೊಂಡು ಜೇನುದಾಳಿಯಿಂದ ರಕ್ಷಣೆ ಪಡೆದಿದ್ದರು. ಕೊಠಡಿಯ ಕಿಟಕಿಗಳಿಗೆ ನೆಟ್ ಹಾಕಿದ್ದರಿಂದ ಅವರುಗಳು ಅಪಾಯದಿಂದ ಪಾರಾಗಿದ್ದರು. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ ಎಂದೂ ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.