ADVERTISEMENT

ಟಿಪ್ಪರ್‌ ಚಾಲಕನ ಬಂಧನ– ಟಿಪ್ಪರ್‌, ಜೆಸಿಬಿ, ಮರಳು ವಶಕ್ಕೆ

ಕಣ್ಣೂರು: ಮರಳು ಅಕ್ರಮ ಗಣಿಗಾರಿಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 5:14 IST
Last Updated 7 ಡಿಸೆಂಬರ್ 2022, 5:14 IST

ಮಂಗಳೂರು:ನಗರದ ಕಣ್ಣೂರು ಮಸೀದಿಯ ಹಿಂಭಾಗದಲ್ಲಿ ನೇತ್ರಾವತಿ ನದಿ ತೀರದಲ್ಲಿ ಮರಳಿನ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಕಂಕನಾಡಿ ಠಾಣೆಯ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಮರಳು ಸಾಗಿಸಲು ಬಳಸಿದ ಟಿಪ್ಪರ್‌, ಮರಳನ್ನು ಟಿಪ್ಪರ್‌ಗೆ ತುಂಬಿಸಲು ಬಳಸಿದ್ದ ಜೆಸಿಬಿ ವಾಹನವನ್ನು ವಶಕ್ಕೆ ಪಡೆದಿ‌ದ್ದಾರೆ. ಟಿಪ್ಪರ್‌ ಚಾಲಕನ್ನು ಬಂಧಿಸಿದ್ದಾರೆ. ಜೆಸಿಬಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಟಿಪ್ಪರ್‌ ಚಾಲಕನನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹುಲಗಿನಹಾಲ ಗ್ರಾಮ ಸುಭಾಸ್ ಕೆಲೂರ ( 27) ಎಂದು ಗುರುತಿಸಲಾಗಿದೆ.

‘ಕಂಕನಾಡಿ ಠಾಣೆಯ ಇನ್‌ಸ್ಪೆಕ್ಟರ್‌ ಎಚ್‌.ಎಸ್‌.ಭಜಂತ್ರಿ ಅವರು ಮಂಗಳವಾರ ಬೆಳಿಗ್ಗೆ 8.10ರ ಸುಮಾರಿಗೆ ಸಿಬ್ಬಂದಿ ಜೊತೆ ಗಸ್ತು ತಿರುಗುತ್ತಿದ್ದಾಗ ಮರಳು ಅಕ್ರಮ ಸಾಗಣೆ ಬಗ್ಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ಧಾವಿಸಿದಾಗ ಜೆಸಿಬಿ ಚಾಲಕ ಅಲ್ಲಾವುದ್ದೀನ್‌ ಪರಾರಿಯಾದ. ಟಿಪ್ಪರ್‌ ಚಾಲಕ ಸುಭಾಷ್‌ನನ್ನು ಬಂಧಿಸಿದ್ದೇವೆ. ಟಿಪ್ಪರ್‌ ಹಾಗೂ ಜೆಸಿಬಿಯು ಮಹಮ್ಮದ್‌ ಅಯೂಬ್‌ ಅವರಿಗೆ ಸೇರಿದ್ದು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ಲಾರಿಯಲ್ಲಿ ಎರಡು ಯುನಿಟ್‌ ಮರಳು ಇತ್ತು. ಅದರ ಮೌಲ್ಯ ₹ 6 ಸಾವಿರ. ವಶಪಡಿಸಿಕೊಂಡ ಟಿಪ್ಪರ್ ಲಾರಿಯ ಮೌಲ್ಯ ₹ 10 ಲಕ್ಷ ಹಾಗೂ ಜೆಸಿಬಿ ಯಂತ್ರದ ಮೌಲ್ಯ ₹ 25 ಲಕ್ಷ’ ಎಂದು ಅವರು ತಿಳಿಸಿದರು.

ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.