ADVERTISEMENT

ದೇರಳಕಟ್ಟೆಯಲ್ಲಿ ಯಕ್ಷಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 4:40 IST
Last Updated 6 ಮಾರ್ಚ್ 2023, 4:40 IST
ದೇರಳಕಟ್ಟೆಯಲ್ಲಿ ಯಕ್ಷ ಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯನ್ನು ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಿದರು. ಯು.ಟಿ.ಖಾದರ್‌, ಸತೀಶ್ ಶೆಟ್ಟಿ ಪಟ್ಲ, ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಇದ್ದರು
ದೇರಳಕಟ್ಟೆಯಲ್ಲಿ ಯಕ್ಷ ಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯನ್ನು ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಿದರು. ಯು.ಟಿ.ಖಾದರ್‌, ಸತೀಶ್ ಶೆಟ್ಟಿ ಪಟ್ಲ, ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಇದ್ದರು   

ಮುಡಿಪು: ‘ಸಂಪತ್ತನ್ನು ನಾವು ಧರ್ಮ ಯುಕ್ತವಾಗಿ ಗಳಿಕೆ ಮಾಡಿ, ಸಮಾಜ ಮುಖಿ ಉದ್ದೇಶಗಳಿಗೆ ಧರ್ಮಯುಕ್ತ ವಾಗಿಯೇ ಬಳಕೆ ಮಾಡಿದರೆ ಜೀವನ ದಲ್ಲಿ ಸಂತೃಪ್ತಿ ಮತ್ತು ಯಶಸ್ಸು ಕಾಣಲು ಸಾಧ್ಯ ಎಂದು ಒಡಿಯೂರಿನ ಗುರು ದೇವಾನಂದ ಸ್ವಾಮೀಜಿ ಹೇಳಿದರು.

ದೇರಳಕಟ್ಟೆಯಲ್ಲಿ ಭಾನುವಾರ ಯಕ್ಷಧ್ರುವ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.‌ ‘ಪ್ರಾಮಾಣಿಕತೆ ಮತ್ತು ಪಾರ ದರ್ಶಕತೆ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಕ್ಷಧ್ರುವ ಸೌಹಾರ್ದ ಕೋಆಪರೇಟಿವ್ ಸೊಸೈಟಿಯು ಉತ್ತಮ ಉದ್ದೇಶದಿಂದ ಆರಂಭಗೊಂಡಿದ್ದು, ಸಮಾಜಕ್ಕೆ ಬೆಳಕು ಮೂಡಿಸುವ ಪ್ರಯತ್ನದೊಂದಿಗೆ ಇದರ ಕೀರ್ತಿ ಇಡೀ ಜಗತ್ತಿಗೆ ಪಸರಿಸಲಿ’ ಎಂದು ಹೇಳಿದರು.

ಹೇರಂಭಾ ಇಂಡಸ್ಟೀಸ್ ಮತ್ತು ಕೆಮಿನೋ ಫಾರ್ಮಾಲಿಯ ಅಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಸೊಸೈಟಿಯನ್ನು ಉದ್ಘಾಟಿಸಿ, ‘ಸಮಾಜದಲ್ಲಿ ಕೆಲವೇ ಜನ ಸಮಾಜಮುಖಿ ಯಾಗಿ ಕೆಲಸ ಮಾಡುತ್ತಿದ್ದಾರೆ. ಭಾಗವತ ಸತೀಶ್ ಪಟ್ಲ ಅವರು ಮೇರು ಕಲಾವಿದರಾಗಿದ್ದು ಕೊಂಡು ಕಲಾವಿದರ ಸಂಕಷ್ಟಕ್ಕೆ ನೆರವಾಗುವುದರೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಯಕ್ಷಧ್ರುವ ಸೌಹಾರ್ದ ಕೋಆ ಪರೇಟಿವ್ ಸೊಸೈಟಿಯ ಮೂಲಕ ಮತ್ತಷ್ಟು ಜನಸೇವೆಗೆ ಮುಂದಾಗಿರು ವುದು ಶ್ಲಾಘನೀಯ ಎಂದರು.

ADVERTISEMENT

ಅಧ್ಯಕ್ಷತೆಯನ್ನು ಶಾಸಕ ಯು.ಟಿ ಖಾದರ್ ವಹಿಸಿ ಮಾತನಾಡಿ, ‘ಈಗಿನ ಕಾಲದಲ್ಲಿ ಎಲ್ಲವೂ ಇದ್ದರೂ ಜನರಿಗೆ ತಾಳ್ಮೆ ಕಡಿಮೆಯಾಗುತ್ತಿದೆ. ಆದರೆ, ಯಕ್ಷಗಾನ ಅಥವಾ ಇತರ ಕಲೆಗಳಲ್ಲಿ ತೊಡಗಿಸಿಕೊಂಡವರು ತಾಳ್ಮೆಯ ಜೀವನ‌ ನಡೆಸುತ್ತಿರುವುದನ್ನು ನಾವು ನೋಡಬಹುದು ಎಂದರು.

ಭದ್ರತಾ ಕೋಶದ ಉದ್ಘಾಟನೆಯನ್ನು ಪ್ರವರ್ತಕ ಐಕಲ ಹರೀಶ್‌ ಶೆಟ್ಟಿ ನೆರವೇರಿಸಿದರು. ಷೇರು ಪ್ರಮಾಣಪತ್ರವನ್ನು ನಿಟ್ಟೆ ವಿಶ್ವವಿದ್ಯಾಲಯದ ಡಾ.ಸತೀಶ್ ಭಂಡಾರಿ ಬಿಡುಗಡೆಗೊಳಿಸಿದರು. ಯಕ್ಷಧ್ರುವ ನಗದು ಪತ್ರವನ್ನು ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಸತ್ತಾರ್, ಸಹಕಾರ ಸಂಘಗಳ ಉಪನಿಬಂಧಕ ಎಸ್. ಎಸ್. ರಮೇಶ್ ಬಿಡುಗಡೆಗೊಳಿಸಿದರು.

ಮಾಸಿಕ ಠೇವಣಿ ಖಾತೆ ಪುಸ್ತಕ ಬಿಡುಗಡೆಯನ್ನು ಕಂಫರ್ಟ್‌ ಇನ್ ಹೋಟೆಲ್ ಮಾಲೀಕ ಚಂದ್ರಹಾಸ ಶೆಟ್ಟಿ ನೆರವೇರಿಸಿದರು. ಉಳಿತಾಯ ಖಾತೆ ಪುಸ್ತಕ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ ಬಿಡುಗಡೆಗೊಳಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಟಿ.ಜಿ ರಾಜಾರಾಮ್ ಭಟ್ ಗಣಕ ಯಂತ್ರ ಉದ್ಘಾಟಿಸಿದರು.

ಪತ್ರಕರ್ತ ವಾಲ್ಟರ್ ನಂದಳಿಕೆ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ಸವಣೂರು ಸೀತಾರಾಮ ರೈ, ಸುರೇಶ್ ಭಂಡಾರಿ ಕಡಂದಲೆ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಸುಧಾಕರ ಪೂಂಜ, ಸಂತೋಷ್ ಕುಮಾರ್ ಶೆಟ್ಟಿ, ಪುರುಷೋತ್ತಮ ಭಂಡಾರಿ, ಗಿರೀಶ್ ಶೆಟ್ಟಿ, ರವಿಚಂದ್ರ ಶೆಟ್ಟಿ, ಲೋಕೇಶ್ ಪೂಜಾರಿ, ಆರತಿ ಆಳ್ವ, ಪ್ರಭಾರ ಪ್ರಧಾನ ವ್ಯವಸ್ಥಾಪಕಿ ತನುಜಾ, ಜೆ. ಅಡ್ಯಾಂತ್ತಾಯ ಇದ್ದರು. ನಿರ್ದೇಶಕರಾದ ಸವಣೂರು ಸೀತರಾಮ ರೈ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ನಿರೂಪಿಸಿದರು.

‘ಸಮಾಜಮುಖಿ ಸೇವೆ ಉದ್ದೇಶ’

ಸಮಾಜಮುಖಿ ಚಿಂತನೆಯೊಂದಿಗೆ ಈ ರಂಗಕ್ಕೆ ಇಳಿದಿದ್ದೇವೆ. ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಪಟ್ಲ ಫೌಂಡೇಷನ್ ಆರಂಭಿಸಿದ್ದೆವು. ಟ್ರಸ್ಟ್ ಆರ್ಥಿಕ ಶಕ್ತಿಯ ಮುನ್ನಡೆಗಾಗಿ ಹಾಗೂ ಎಲ್ಲಾ ರಂಗದ ಕಲಾವಿದರ ವಲಯದ ಅನುಕೂಲದ ಹಿತದೃಷ್ಟಿಯಿಂದ ಈ ಕೋ ಆಪರೇಟಿವ್ ಸೊಸೈಟಿಯ ಲಾಭಾಂಶವನ್ನು ಹಂಚುವ ಉದ್ದೇಶ ಇಟ್ಟುಕೊಂಡಿದ್ದೇವೆ ಎಂದು ಭಾಗವತ, ಸೊಸೈಟಿ ಪ್ರವರ್ತಕ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.