ಉಳ್ಳಾಲ: ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ರೂಪಿಸಲು ಆರೋಗ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ತಾಲ್ಲೂಕು ಆಸ್ಪತ್ರೆಯನ್ನಾಗಿ ರಚಿಸಲು ಮುಂದಿನ ವರ್ಷ ತೀರ್ಮಾನಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಕಟ್ಟಡದ ಉದ್ಘಾಟನೆ, ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿ ಪುತ್ತೂರಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿರುವುದರಿಂದ ಮುಂದಿನ ವರ್ಷ ತಾಲ್ಲೂಕು ಆಸ್ಪತ್ರೆಯ ಬಗ್ಗೆ ಪ್ರಸ್ತಾಪಿಸಲಾಗುವುದು. ₹ 70 ಕೋಟಿ ಅನುದಾನ ಒದಗಿಸುವ ಮೂಲಕ ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಘೋಷಿಸಲು ಮುಂದಾಗಿದ್ದೇವೆ. ಆರೋಗ್ಯ ಕೇಂದ್ರದಲ್ಲಿ ಪುನಃಶ್ಚೇತನ ಕೇಂದ್ರ ಸ್ಥಾಪಿಸಲು ಸರ್ಕಾರದಿಂದ ಗರಿಷ್ಠ ಅನುದಾನ ಒದಗಿಸಲಾಗುವುದು. ಕೊರತೆ ಆದರೆ ಖಾಸಗಿಯವರಿಂದ ಪಡೆಯುವುದು ಅನಿವಾರ್ಯ ಎಂದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರವು ರಾಜ್ಯಕ್ಕೆ ಮಾದರಿಯಾಗಿದೆ. ಅತ್ಯುತ್ತಮ ಪ್ರಯೋಗಾಲಯ ಸಹಿತ ಸಮುದಾಯ ಆರೋಗ್ಯ ಕೇಂದ್ರ ಹೇಗಿರಬೇಕೋ ಅದಕ್ಕೆ ಬೇಕಾದ ಮೂಲ ಸೌಕರ್ಯಗಳನ್ನ ಒದಗಿಸಲಾಗಿದೆ. ಆಯುಷ್ ಚಿಕಿತ್ಸಾ ಕೇಂದ್ರವನ್ನೂ ಇಲ್ಲಿ ಆರಂಭಿಸಲಾಗಿದ್ದು, ಜಾಗ ಕೊರತೆ ನಿವಾರಿಸಲು ಮೊದಲನೇ ಮಹಡಿಯಲ್ಲಿ ಆಯುಷ್ ಆಸ್ಪತ್ರೆಗೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಉಚಿತವಾಗಿ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗಿದೆ ಎಂದರು.
ಉಳ್ಳಾಲದಿಂದ ತಲಪಾಡಿ ಬೀಚ್ ಬದಿಯಲ್ಲಿ ಮುಂಬೈ ಮರೈನ್ ಡ್ರೈವ್ ಮಾದರಿಯಲ್ಲಿ ರಸ್ತೆ ನಿರ್ಮಿಸುವ ಕನಸಿದೆ ಎಂದರು.
ಕೇಂದ್ರಕ್ಕೆ ಅನುದಾನ ನೀಡಿದ ಎಲ್ಪಿಜಿ ಬಿಪಿಸಿಎಲ್ ಸಂಸ್ಥೆ ಮುಖ್ಯಸ್ಥೆ ನೀರಾ ಸಿಂಗ್, ಸಮುದಾಯ ಆರೋಗ್ಯ ಕೇಂದ್ರ ಉಸ್ತುವಾರಿ ವಹಿಸಿರುವ ಯೆನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ, ಕಣಚೂರು ಮೆಡಿಕಲ್ ಕಾಲೇಜು ಚೇರ್ಮನ್ ಯು.ಕೆ.ಮೋನು, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬಿಪಿಸಿಎಲ್ ಸಂಸ್ಥೆಯ ಅಧಿಕಾರಿ ಪರ್ವೇಜ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತ ಡಿ.ಎಸ್.ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ನಗರಸಭೆಯ ಅಧ್ಯಕ್ಷೆ ಶಶಿಕಲಾ ಉಳ್ಳಾಲ, ಪ್ರಮುಖರಾದ ರಶೀದ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕೆ., ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ರಾಜೇಶ್ ಬಿ.ವಿ., ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್, ಉಳ್ಳಾಲ ನಗರಸಭೆ ಆಯುಕ್ತ ಮತ್ತಡಿ, ಆಡಳಿತ ವೈದ್ಯಾಧಿಕಾರಿ ನಿಖಿಲ್, ಮಾರುತಿ ಯುವಕ ಮಂಡಲದ ವರದರಾಜ್ ಬಂಗೇರ, ಸುಧೀರ್ ಪುತ್ರನ್, ಪದ್ಮರಾಜ್ ಆರ್.ಕರ್ಕೇರ ಭಾಗವಹಿಸಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಸ್ವಾಗತಿಸಿದರು. ಅಬ್ದುಲ್ ರಝಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.
ಮಾರುತಿ ಯುವಕ ಮಂಡಲದ ಅಧ್ಯಕ್ಷ ಸಂದೀಪ್ ಪುತ್ರನ್, ಯು.ಟಿ.ಖಾದರ್, ದಿನೇಶ್ ಗುಂಡೂರಾವ್, ನೀರಾ ಸಿಂಗ್ ಅವರನ್ನು ಅಭಿನಂದಿಸಲಾಯಿತು.
ನೂತನ ಡಯಾಲಿಸಿಸ್ ಕೇಂದ್ರದ ಉದ್ಘಾಟನೆ, ಶವಾಗಾರ ಉದ್ಘಾಟನೆ, ಶವ ಶೀತಲೀಕರಣ ಪೆಟ್ಟಿಗೆ ಹಸ್ತಾಂತರ, ನೂತನ ಪುನರ್ವಸತಿ ಕೇಂದ್ರದ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ, ಆಯುಷ್ ಆಸ್ಪತ್ರೆಯ ಮೊದಲನೆ ಮಹಡಿ ಕಾಮಗಾರಿ ಶಂಕುಸ್ಥಾಪನೆ ನಡೆಯಿತು.
ಉಳ್ಳಾಲದ ಚೀರುಂಭ ಭಗವತಿ ಕ್ಷೇತ್ರಕ್ಕೆ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು.
ಅಲೈಡ್ ಹೆಲ್ಸ್ ಸೈನ್ಸ್ ನಿಗಮದ ಅಧ್ಯಕ್ಷ ಯು.ಟಿ.ಇಫ್ತಿಕಾರ್ ಅಲಿ, ಪ್ರಮುಖರಾದ ಹರೀಶ್ ಕುಮಾರ್, ಸುರೇಶ್ ಭಟ್ನಗರ, ಸದಾಶಿವ ಉಳ್ಳಾಲ್, ದಿನೇಶ್ ಕುಂಪಲ, ಶಶಿಕಲಾ, ಸುರೇಖಾ ಚಂದ್ರಹಾಸ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.