ಮಂಗಳೂರು: ಸುರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಲ್ಲಿ (ಎನ್ಐಟಿಕೆ) ನಾಲ್ಕು ದಿನಗಳ ಸಾಂಸ್ಕೃತಿಕ ಉತ್ಸವ ‘ಇನ್ಸಿಡೆಂಟ್ 2025’ರ 44ನೇ ಆವೃತ್ತಿ ಗುರುವಾರ ಉದ್ಘಾಟನೆಗೊಂಡಿತು.
‘ಉದ್ಭವ’ ಎಂಬ ಮೂಲ ಪರಿಕಲ್ಪನೆಯಲ್ಲಿ ಸಂಗೀತ, ನೃತ್ಯ, ಸಾಹಿತ್ಯ, ಕ್ರೀಡೆ, ಫ್ಯಾಷನ್, ಗೇಮಿಂಗ್, ನಾಟಕ ಸೇರಿದಂತೆ 50ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಸಂಸದ ಕ್ಯಾ. ಬ್ರಿಜೇಶ್ ಚೌಟ ಕಾರ್ಯಕ್ರಮ ಉದ್ಘಾಟಿಸಿದರು. ದಕ್ಷಿಣ ಕನ್ನಡವು ಅವಕಾಶಗಳ ಸಾಗರವಾಗಿದ್ದು, ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆ ಇಲ್ಲಿ ಬೇರೂರಿದೆ. ಸಾಮರ್ಥ್ಯ ಅರಿತುಕೊಳ್ಳಲು, ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ಎನ್ಐಟಿಕೆಯ ಅಕಾಡೆಮಿ ಫಾರ್ ಡಿಫೆನ್ಸ್, ಅಡ್ವೆಂಚರ್ ಆ್ಯಂಡ್ ಲೀಡರ್ಷಿಪ್ (ನಡಾಲ್) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಚೌಟ, ನಡಾಲ್ ನಾಯಕರನ್ನು ಬೆಳೆಸುವ ಪ್ರಮುಖ ಅಕಾಡೆಮಿಯಾಗಬೇಕು. ರಾಜಕೀಯ ಮಾತ್ರವಲ್ಲ, ಪ್ರತಿಯೊಂದು ಕ್ಷೇತ್ರದಲ್ಲೂ ನಾಯಕರ ಅಗತ್ಯವಿದೆ. ನಾಯಕ ಆಗುವವನಿಗೆ ವೃತ್ತಿಪರ ಸಾಮರ್ಥ್ಯ ಮತ್ತು ಜ್ಞಾನ ಇರಬೇಕು ಎಂದರು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿದರು. ಎನ್ಐಟಿಕೆ ನಿರ್ದೇಶಕ ಪ್ರೊ.ಬಿ. ರವಿ ಅಧ್ಯಕ್ಷತೆ ವಹಿಸಿದ್ದರು. ಡೆಲ್ನ ಅಧ್ಯಕ್ಷ ಅಲೋಕ್ ಒಹ್ರಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಎ.ಸಿ.ಹೆಗ್ಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.