ADVERTISEMENT

ದಕ್ಷಿಣ ಕನ್ನಡ | ಅಂತರ ಜಿಲ್ಲಾ, ರಾಜ್ಯ ಪ್ರಯಾಣಕ್ಕೆ ಮಾರ್ಗಸೂಚಿ

ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರಿಂದ ಪ್ರಕಟಣೆ

​ಪ್ರಜಾವಾಣಿ ವಾರ್ತೆ
Published 3 ಮೇ 2020, 2:26 IST
Last Updated 3 ಮೇ 2020, 2:26 IST
ಪ್ರಯಾಣಿಕರು– ಸಾಂದರ್ಭಿಕ ಚಿತ್ರ
ಪ್ರಯಾಣಿಕರು– ಸಾಂದರ್ಭಿಕ ಚಿತ್ರ   

ಮಂಗಳೂರು: ಕೇಂದ್ರ ಸರ್ಕಾರದ ಆದೇಶದಂತೆ ಲಾಕ್‌ಡೌನ್‌ ಅವಧಿಯಲ್ಲಿ ಅಂತರ ಜಿಲ್ಲಾ ಮತ್ತು ಅಂತರ ರಾಜ್ಯ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಶನಿವಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿಗಳಿಗೆ ಸೀಮಿತವಾಗಿ ಪ್ರಯಾಣಕ್ಕೆ ಅನುಮತಿ ದೊರೆಯಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಜಿಲ್ಲಾಧಿಕಾರಿಗಳ ಜೊತೆ ನಡೆಸಿದ ವಿಡಿಯೊ ಸಂವಾದದಲ್ಲಿ ನೀಡಿದ ನಿರ್ದೇಶನದಂತೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಈ ಕ್ರಮ ಕೈಗೊಂಡಿದ್ದಾರೆ. ಪ್ರಯಾಣಕ್ಕೆ ಪಡೆಯುವ ಅನುಮತಿಯನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಹೋಗುವವರಿಗೆ:

ADVERTISEMENT

* ಒಂದು ಬಾರಿ ಮಾತ್ರ ಪ್ರಯಾಣಕ್ಕೆ ಅವಕಾಶ.

* ನಗರ ವ್ಯಾಪ್ತಿಯಲ್ಲಿ ಎಸಿಪಿ ಕಚೇರಿ ಮತ್ತು ಗ್ರಾಮಾಂತರದಲ್ಲಿ ಪೊಲೀಸ್‌ ಠಾಣೆಗಳಲ್ಲಿ ಅರ್ಜಿ ಸಲ್ಲಿಸಬೇಕು.

* ಪೊಲೀಸ್‌ ಕಮಿಷನರ್‌, ಡಿಸಿಪಿ ಮತ್ತು ಎಸ್‌ಪಿ ಕಚೇರಿಗಳಿಂದ ಪಾಸ್‌ ವಿತರಣೆ.

* ಕೋವಿಡ್‌–19 ಸೋಂಕಿನ ಲಕ್ಷಣ ಇಲ್ಲದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ.

* ಅನುಮತಿ ಪಡೆದ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್‌ ಮತ್ತು ಗ್ಲೌಸ್‌ ಧರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು.

* ಪ್ರಯಾಣಿಕರು ತಲುಪುವ ಜಿಲ್ಲೆಗಳಲ್ಲಿನ ಎಲ್ಲ ಕ್ವಾರಂಟೈನ್‌ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

* ವಾಹನವನ್ನು ಮಾರ್ಗ ಮಧ್ಯದಲ್ಲಿ ಎಲ್ಲಿಯೂ ನಿಲುಗಡೆ ಮಾಡುವಂತಿಲ್ಲ.

ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಹೋಗುವವರಿಗೆ:

* https://sevasindhu.karnataka.gov.in ಇಲ್ಲಿ ಲಾಗಿನ್‌ ಆಗಿ ಹೆಸರು ಹಾಗೂ ಇತರ ವಿವರ ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು.

* ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲದೇ ಇರುವವರು ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳು, ಪಟ್ಟಣ ಪಂಚಾಯಿತಿ, ಪುರಸಭೆ ಅಥವಾ ನಗರಸಭೆ ಕಚೇರಿ, ಎಲ್ಲ ತಾಲ್ಲೂಕು ಕಚೇರಿಗಳು, ಮಂಗಳೂರು ಮಹಾನಗರ ಪಾಲಿಕೆಯ ಎಲ್ಲ ವಲಯ ಕಚೇರಿಗಳು, ಮಂಗಳೂರು ಒನ್‌ ಮತ್ತು ಮಂಗಳೂರು ನಗರದ ವ್ಯಾಪ್ತಿಯ ಎಲ್ಲ ನಾಡ ಕಚೇರಿಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು.

* ರಾಜ್ಯ ಮಟ್ಟದಲ್ಲಿ ಅರ್ಜಿಗಳನ್ನು ಪರಿಶೀಲನೆ ನಡೆಸಲಿದ್ದು, ರಾಜ್ಯದ ಸಹಮತ ಇದ್ದಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ. ಅನುಮತಿ ಪಡೆದಿರುವವರಿಗೆ ರಾಜ್ಯ ಸರ್ಕಾರದ ನೋಡಲ್‌ ಅಧಿಕಾರಿಯವರ ನಿರ್ದೇಶನದ ಮೇರೆಗೆ ಪ್ರಯಾಣದ ವ್ಯವಸ್ಥೆ ಮಾಡಲಾಗುತ್ತದೆ. ಪ್ರಯಾಣಿಕರೇ ಟಿಕೆಟ್‌ ಖರೀದಿಸಬೇಕು.

* ಪ್ರಯಾಣಕ್ಕೂ ಮೊದಲು ವೈದ್ಯಕೀಯ ಸ್ಕ್ರೀನಿಂಗ್‌ ನಡೆಸಲಾಗುತ್ತದೆ.

* ಅನುಮತಿ ಪಡೆದಿರುವ ಪ್ರಯಾಣಿಕರು ತಮ್ಮೊಂದಿಗೆ ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್‌, ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಅಥವಾ ಪಾನ್‌ ಕಾರ್ಡ್‌ಗಳಲ್ಲಿ ಒಂದನ್ನು ಪ್ರಯಾಣದ ಅವಧಿಯಲ್ಲಿ ತಮ್ಮೊಂದಿಗೆ ಇರಿಸಿಕೊಳ್ಳಬೇಕು.

* ಯಾವುದೇ ಸಂದೇಹ ಇದ್ದಲ್ಲಿ ನಿಯಂತ್ರಣ ಕೊಠಡಿ ಸಂಖ್ಯೆ 1077 ಅಥವಾ ವಾಟ್ಸ್‌ಆ್ಯಪ್‌ ಸಂಖ್ಯೆ 94839 08000 ಸಂಪರ್ಕಿಸುವುದು.

ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬರುವವರಿಗೆ:

* https://sevasindhu.karnataka.gov.in ಇಲ್ಲಿ ಲಾಗಿನ್‌ ಆಗಿ ಹೆಸರು ಹಾಗೂ ಇತರ ವಿವರ ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು.

* ಈ ಅರ್ಜಿಗಳನ್ನು ರಾಜ್ಯದಿಂದ ನೇಮಿಸಿರುವ ನೋಡಲ್‌ ಅಧಿಕಾರಿಗಳು ಪರಿಶೀಲನೆ ನಡೆಸಿ, ಅರ್ಜಿ ಸಲ್ಲಿಸಿದ ರಾಜ್ಯದ ನೋಡಲ್‌ ಅಧಿಕಾರಿಗಳ ಜೊತೆ ಚರ್ಚಿಸುತ್ತಾರೆ. ಕರ್ನಾಟಕ ಸರ್ಕಾರದ ಅನುಮೋದನೆ ದೊರೆತ ಪ್ರಯಾಣಿಕರಿಗೆ ಮಾತ್ರ ಪ್ರಯಾಣಕ್ಕೆ ಅನುಮತಿ ಲಭಿಸುತ್ತದೆ.

* ಕೋವಿಡ್‌–19 ಸೋಂಕಿನ ಲಕ್ಷಣಗಳು ಇಲ್ಲದೇ ಇರುವವರಿಗೆ ಮಾತ್ರ ಪ್ರಯಾಣಕ್ಕೆ ಅನುಮತಿ.

* ಜಿಲ್ಲೆಗೆ ಬರುವ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ವೈದ್ಯಕೀಯ ಸ್ಕ್ರೀನಿಂಗ್‌ಗೆ ಒಳಪಟ್ಟಿರಬೇಕು.

* ಸರ್ಕಾರಿ ಅಥವಾ ಖಾಸಗಿ ಬಸ್‌, ರೈಲ್ವೆ ಮೂಲಕ ಪ್ರಯಾಣಿಸಬಹುದಾಗಿದ್ದು, ಪ್ರಯಾಣಿಕರೇ ಟಿಕೆಟ್‌ ವೆಚ್ಚ ಭರಿಸಬೇಕು.

* ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು.

* ಜಿಲ್ಲೆಗೆ ಬರುವ ಪ್ರಯಾಣಿಕರನ್ನು ವೈದ್ಯಕೀಯ ಸಲಹೆ ಆಧರಿಸಿ ಹೋಂ ಕ್ವಾರಂಟೈನ್‌ ಅಥವಾ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು.

* ಸ್ಥಳೀಯ ಪ್ರಾಧಿಕಾರಗಳು ಕ್ವಾರಂಟೈನ್‌ ನಿಯಮಗಳನ್ನು ಜಾರಿಗೊಳಿಸುವ ಜವಾಬ್ದಾರಿ ಹೊಂದಿದ್ದು, ಆರೋಗ್ಯ ಇಲಾಖೆಯಿಂದ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.

* ಅನುಮತಿ ಪಡೆದಿರುವ ಪ್ರಯಾಣಿಕರು ತಮ್ಮೊಂದಿಗೆ ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್‌, ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಅಥವಾ ಪಾನ್‌ಕಾರ್ಡ್‌ಗಳಲ್ಲಿ ಒಂದನ್ನು ಪ್ರಯಾಣದ ಅವಧಿಯಲ್ಲಿ ತಮ್ಮೊಂದಿಗೆ ಇರಿಸಿಕೊಳ್ಳಬೇಕು.

* ಯಾವುದೇ ಸಂದೇಹವಿದ್ದಲ್ಲಿ ನಿಯಂತ್ರಣ ಕೊಠಡಿ ಸಂಖ್ಯೆ 1070/ 104/ 080– 46848600/ 080– 66692000, ವಾಟ್ಸ್‌ಆ್ಯಪ್‌ ಸಂಖ್ಯೆ 97456 97456/ 99802 99802 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.