ಕಡಬ(ಉಪ್ಪಿನಂಗಡಿ): ರಾಮಕುಂಜ ಗ್ರಾಮದ ಆತೂರು ಜಂಕ್ಷನ್ನಲ್ಲಿ ಪೊಲೀಸ್ ಚೆಕ್ಪೋಸ್ಟ್ ಧ್ವಂಸ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಚಿನ್ನಪ್ಪ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
‘ಜೂನ್ 29ರಂದು ಕೋವಿಡ್ ಲಾಕ್ಡೌನ್ ನಿಮಿತ್ತ ಕರ್ತವ್ಯ ನಿರ್ವಹಿಸುತ್ತಿರುವಾಗ, ಮಧ್ಯಾಹ್ನ 11.45ರ ಸುಮಾರಿಗೆ ಉಪ್ಪಿನಂಗಡಿ ಕಡೆಯಿಂದ ಕಡಬದ ಕಡೆಗೆ ವೇಗವಾಗಿ ಬರುತ್ತಿದ್ದ ವಾಹನವು, ರಸ್ತೆ ದಾಟುತ್ತಿದ್ದ ಹ್ಯಾರೀಸ್ ಎಂಬುವವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸುದ್ದಿ ತಿಳಿದು, ಸ್ಥಳಕ್ಕೆ ಬಂದ ಜನರ ಪೈಕಿ 10–15 ಜನರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, ರಸ್ತೆಗೆ ಹಾಕಿದ್ದ ಬ್ಯಾರಿಕೇಡ್ ಎಳೆದು ಹಾಕಿದ್ದರು. ಚೆಕ್ಪೋಸ್ಟ್ ಬಳಿ ಬಂದ ಕಾನ್ಸ್ಟೇಬಲ್ ಹರೀಶಕುಮಾರ್ ಅವರನ್ನು ದೂಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಜತೆಗೆ, ಸಾರ್ವಜನಿಕರು ನಿರ್ಮಿಸಿಕೊಟ್ಟಿದ್ದ ಚೆಕ್ಪೋಸ್ಟ್ ಶೆಡ್ ಧ್ವಂಸ ಮಾಡಿ, ಮೂರು ಕುರ್ಚಿ ಮುರಿದು ಹಾಕಿದ್ದಾರೆ. ಇಲ್ಲಿ ಚೆಕ್ಪೋಸ್ಟ್ ಹಾಕಿದರೆ ನಿಮ್ಮನ್ನು ಮತ್ತು ಇಲಾಖಾ ಸಿಬ್ಬಂದಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಆರೋಪಿಗಳು ಸ್ಥಳದಿಂದ ಓಡಿಹೋಗಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.