ಬಂಟ್ವಾಳ: ತಾಲ್ಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ದಶಮಾನೋತ್ಸವ ಸಂಭ್ರಮ ಮತ್ತು 10ನೇ ವರ್ಷದ 'ಸತ್ಯ- ಧರ್ಮ' ಜೋಡುಕರೆ ಬಯಲು ಕಂಬಳ ನ. 26ರಂದು ಮೈರ- ಬರ್ಕೆಜಾಲುಯಲ್ಲಿ ನಡೆಯಲಿದೆ.
ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಗೌರವಾಧ್ಯಕ್ಷತೆ ಮತ್ತು ಕುಸುಮಾಧರ ಉರ್ಕೆ ಅಧ್ಯಕ್ಷತೆಯಲ್ಲಿ ಕಂಬಳ ನಡೆಯಲಿದೆ. ಈ ಕೂಟದಲ್ಲಿ ಸುಮಾರು 200 ಜೋಡಿ ಓಟದ ಕೋಣಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಅಂದು ಬೆಳಿಗ್ಗೆ ಉಳಿ ಗೋಪಾಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ಯೋಗೀಂದ್ರ ಭಟ್ ಕಂಬಳಕ್ಕೆ ಚಾಲನೆ ನೀಡಲಿದ್ದು, ಸಂಜೆ ನಡೆಯುವ ಸಮಾರೋಪದಲ್ಲಿ ಸಚಿವರಾದ ವಿ.ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮತ್ತಿತರರು ಭಾಗವಹಿಸುವರು. ರಾಜ್ಯೋತ್ಸವ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಪದಾಧಿಕಾರಿಗಳಾದ ಸಾಂತಪ್ಪ ಪೂಜಾರಿ ಹಟದಡ್ಕ, ಸುರೇಶ್ ಮೈರ, ರಂಜಿತ್ ಮೈರ, ರವೀಂದ್ರ ಶೆಟ್ಟಿ, ಯಶೋಧರ ಕರ್ಬಟ್ಟು ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.