ADVERTISEMENT

‘ಸಮಾಜಮುಖಿ ಕಾರ್ಯ ನಿರಂತರ’

ಕರ್ಣಾಟಕ ಬ್ಯಾಂಕ್‌ನಿಂದ ಎರಡು ಬಸ್ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 7:52 IST
Last Updated 5 ಜನವರಿ 2021, 7:52 IST
ಕಟಪಾಡಿಯಲ್ಲಿ ನಿರ್ಮಿಸಿರುವ ಬಸ್‌ ನಿಲ್ದಾಣಗಳನ್ನು ಕರ್ಣಾಟಕ ಬ್ಯಾಂಕಿನ ಮುಖ್ಯ ವ್ಯವಹಾರ ಅಧಿಕಾರಿ ಗೋಕುಲದಾಸ್‌ ಪೈ ಉದ್ಘಾಟಿಸಿದರು.
ಕಟಪಾಡಿಯಲ್ಲಿ ನಿರ್ಮಿಸಿರುವ ಬಸ್‌ ನಿಲ್ದಾಣಗಳನ್ನು ಕರ್ಣಾಟಕ ಬ್ಯಾಂಕಿನ ಮುಖ್ಯ ವ್ಯವಹಾರ ಅಧಿಕಾರಿ ಗೋಕುಲದಾಸ್‌ ಪೈ ಉದ್ಘಾಟಿಸಿದರು.   

ಮಂಗಳೂರು: ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಕರ್ಣಾಟಕ ಬ್ಯಾಂಕ್, ಕಟಪಾಡಿ ಗ್ರಾಮದ ಮೂಡಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ನಿರ್ಮಿಸಿದ ಬಸ್ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ಣಾಟಕ ಬ್ಯಾಂಕಿನ ಮುಖ್ಯ ವ್ಯವಹಾರ ಅಧಿಕಾರಿ ಗೋಕುಲದಾಸ ಪೈ, ‘ನಮ್ಮ ಬ್ಯಾಂಕ್‌ ಜನೋಪಯೋಗಿ ಕೆಲಸಗಳಿಗೆ ಸ್ಪಂದಿಸುತ್ತಲೇ ಬಂದಿದೆ. ಇಲ್ಲಿನ ಗ್ರಾಮ ಪಂಚಾಯಿತಿಯ ಬೇಡಿಕೆಯ ಮೇರೆಗೆ ಎರಡು ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಬಿಸಿಲು, ಜಡಿಮಳೆಯಲ್ಲಿ ಈ ನಿಲ್ದಾಣಗಳು ಜನರಿಗೆ ಉಪಯೋಗಿ ಆಗಲಿವೆ’ ಎಂದರು.

‘ಕೋವಿಡ್–19 ಸಂಕಷ್ಟದ ಕಾಲದಲ್ಲಿ ನಾವು ಅನುಸರಿಸಬೇಕಾದ ನಿಯಮಗಳ ಸಂದೇಶಗಳನ್ನು ಕೂಡ ಈ ನಿಲ್ದಾಣಗಳ ಭಿತ್ತಿಚಿತ್ರಗಳು ಸಾರುತ್ತಿವೆ. ಈ ಸೌಲಭ್ಯಗಳನ್ನು ಗ್ರಾಮಸ್ಥರು ಪ್ರಯೋಜನ ಪಡೆಯುವುದರ ಜೊತೆಗೆ ಅವುಗಳ ಸ್ವಚ್ಛತೆಯನ್ನು ನಿರ್ವಹಿಸಿಕೊಂಡು ಹೋಗಬೇಕು. ಇಂತಹ ಇನ್ನೂ ಹಲವು ಸಮಾಜಮುಖಿ ಕೆಲಸ ನಾವು ನಿರಂತರ ಮಾಡುತ್ತಲೇ ಇರುತ್ತೇವೆ’ ಎಂದು ತಿಳಿಸಿದರು.

ADVERTISEMENT

ಗ್ರಾಮದ ಮುಖ್ಯಸ್ಥ ಶಿವರಾವ್ ಕಟಪಾಡಿ ಮಾತನಾಡಿದರು. ಮಹಾಪ್ರಬಂಧಕ ಮಂಜುನಾಥ ಭಟ್ ಬಿ.ಕೆ., ಸಹಾಯಕ ಮಹಾಪ್ರಬಂಧಕರಾದ ಗೋಪಾಲಕೃಷ್ಣ ಸಾಮಗ, ಶ್ರೀನಿವಾಸ ದೇಶಪಾಂಡೆ, ಬಸ್ ನಿಲ್ದಾಣಗಳನ್ನು ನಿರ್ಮಿಸಿದ ಕಮಲ್ ಎನ್ ಫ್ಯಾಬ್ ಸಂಸ್ಥೆಯ ರಾಜ್ ಕಮಲ್ ದಾಸ್, ಗ್ರಾಮದ ಪ್ರಮುಖರಾದ ವಿನಯ ಬಲ್ಲಾಳ ಕಟಪಾಡಿ, ಅಶೋಕ್ ರಾವ್ ಕಟಪಾಡಿ, ಸುಭಾಷ ಬಲ್ಲಾಳ, ನಿತಿನ್ ವಿ. ಶೇರಿಗಾರ್, ಮಹೇಶ್ ಪೂಜಾರಿ, ವಿಶ್ವೋತ್ತಮ ಆಚಾರ್ಯ, ಸಂಪತ್ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.