
ಮಂಗಳೂರು: ಸಕಲ ವ್ಯವಸ್ಥೆ ಒಳಗೊಂಡ ಹಣಕಾಸು ಸೂಪರ್ ಮಾರ್ಕೆಟ್ ಆಗುವ ದಿಸೆಯಲ್ಲಿ ಹೆಜ್ಜೆಯಿಟ್ಟಿರುವ ಕರ್ಣಾಟಕ ಬ್ಯಾಂಕ್, ರಾಜ್ಯ ಸರ್ಕಾರದ ‘ಖಜಾನೆ–2’ ಇ –ರಸೀದಿಯನ್ನು ಇಂಟರ್ನೆಟ್ ಬ್ಯಾಂಕಿಂಗ್ ವೇದಿಕೆ ಮೂಲಕ ಪಾವತಿಸುವ ಸೌಲಭ್ಯ ಒದಗಿಸಲಿದೆ. ಜ.14ರಂದು ಇದಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
ಖಜಾನೆ–2, ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆ (ಐಎಫ್ಎಂಎಸ್) ಮೂಲಕ ರಾಜ್ಯ ಸರ್ಕಾರದ ಆದಾಯ ರಸೀದಿಗಳನ್ನು ಸಂಗ್ರಹಿಸಲು ಖಜಾನೆ ಇಲಾಖೆಯ ಅನುಮೋದನೆಯೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಅಗತ್ಯ ಅಧಿಕಾರವನ್ನು ಕರ್ಣಾಟಕ ಬ್ಯಾಂಕ್ ಪಡೆದುಕೊಂಡಿದೆ. ಈ ವ್ಯವಸ್ಥೆ ಅಡಿಯಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ರಾಜ್ಯ ಸರ್ಕಾರದ ತೆರಿಗೆ ಮತ್ತು ಶುಲ್ಕವನ್ನು ಪಾವತಿಸಬಹುದು ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ.
‘ಬ್ಯಾಂಕ್ನ ಸುರಕ್ಷಿತ ಮತ್ತು ಮೌಲ್ಯವರ್ಧಿತ ಡಿಜಿಟಲ್ ಸೇವೆಯ ಮುಂದುವರಿದ ಭಾಗ ಇದಾಗಿದ್ದು, ಪೇಪರ್ರಹಿತ ರಸೀದಿ ವ್ಯವಸ್ಥೆ, ವ್ಯವಹಾರದಲ್ಲಿ ಪಾರದರ್ಶಕತೆ, ದಕ್ಷತೆ ಹೆಚ್ಚಿಸಲು ಇದು ಸಹಕಾರಿಯಾಗಲಿದೆ’ ಎಂದು ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್ ಹೇಳಿದ್ದಾರೆ.