ADVERTISEMENT

ಘನತ್ಯಾಜ್ಯ ನಿಯಮ ಅನುಷ್ಠಾನ: ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್

​ಪ್ರಜಾವಾಣಿ ವಾರ್ತೆ
Published 1 ಮೇ 2021, 4:41 IST
Last Updated 1 ಮೇ 2021, 4:41 IST

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಘನತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಕರ್ನಾಟಕ ಪೌರ ಘನ ತ್ಯಾಜ್ಯ ನಿಯಮವನ್ನು ಅನುಷ್ಠಾನಗೊಳಿಸಲಾಗಿದೆ.

ಈ ನಿಯಮದಂತೆ ಪಾಲಿಕೆ ವ್ಯಾಪ್ತಿಯೊಳಗಿನ ಬೃಹತ್ ತ್ಯಾಜ್ಯ ಉತ್ಪಾದಕರಾದ ಅಪಾರ್ಟ್‍ಮೆಂಟ್ ಅಸೋಸಿಯೇಷನ್‍ಗಳು, ವಿದ್ಯಾರ್ಥಿ ನಿಲಯಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್‍ಗಳು, ಬಾರ್‌ ಅಂಡ್ ರೆಸ್ಟೋರೆಂಟ್‍ಗಳು, ಕಲ್ಯಾಣ ಮಂಟಪಗಳು, ಕ್ಯಾಟರಿಂಗ್‍ಗಳು, ಕೋಳಿ ಮಾರಾಟಗಾರರು, ಸಣ್ಣ ಕೈಗಾರಿಕೆಗಳು, ಬಿಲ್ಡರ್‌ಗಳು ಹಾಗೂ ಇತರರಿಗೆ ತ್ಯಾಜ್ಯವನ್ನು ವಿಂಗಡಿಸಿ, ಮೂಲದಲ್ಲಿಯೇ ತ್ಯಾಜ್ಯ ಸಂಸ್ಕರಿಸುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ.

ಕೆಲವು ಸಂಸ್ಥೆಯವರು ಮಾತ್ರ ಘಟಕವನ್ನು ಸ್ಥಾಪಿಸಿ ತ್ಯಾಜ್ಯ ಸಂಸ್ಕರಣೆ ಮಾಡುತ್ತಿದ್ದಾರೆ. ಬೃಹತ್ ತ್ಯಾಜ್ಯ ಉತ್ಪಾದಕರು ಪಾಲಿಕೆಯ ಸೂಚನೆಯನ್ನು ಪಾಲಿಸಲು ವಿಫಲರಾಗಿದ್ದಾರೆ. ಇವರಿಗೆ ಇನ್ನು ಮುಂದೆ ಯಾವುದೇ ವಿನಾಯಿತಿ ನೀಡದೇ ಮೇ 15ರ ಒಳಗೆ ಕಡ್ಡಾಯವಾಗಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಬೇಕು ಎಂದು ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.

ADVERTISEMENT

ತ್ಯಾಜ್ಯ ಉತ್ಪಾದಕರು ಹೆಚ್ಚಿನ ಮಾಹಿತಿಗೆ ಸಂಸ್ಥೆ ಅಥವಾ ಮಹಾನಗರ ಪಾಲಿಕೆಯ ಪರಿಸರ ಎಂಜಿನಿಯರ್ ದಯಾನಂದ ಪೂಜಾರಿ (7411842856), ಆರೋಗ್ಯ ವಿಭಾಗ (0824-2220313-314) ವನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವೆಬ್‌ಸೈಟ್‌ನಲ್ಲಿ ಪ್ರಕಟ’

ಹಸಿ ಕಸ ಸಂಸ್ಕರಣೆಗೆ ತಂತ್ರಜ್ಞಾನ ಬಳಸಲು ಹಸಿರು ನ್ಯಾಯ ಪೀಠ ರಾಜ್ಯ ಮಟ್ಟದ ಸಮಿತಿಯವರು ಸರ್ಕಾರೇತರ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳ ಪಟ್ಟಿಯನ್ನು ಒದಗಿಸಿದ್ದು, ಇದನ್ನು ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ ತಂತ್ರಜ್ಞಾನ ಹೊಂದಿರುವ ಸಂಸ್ಥೆಗಳ ಪಟ್ಟಿಯನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.