ಮೂಲ್ಕಿ: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 23ರಿಂದ 28ವರೆಗೆ ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠೆ ನಡೆಯಲಿದೆ.
ಅಗತ್ಯ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿವೆ. ದೇವಳವನ್ನು ಒಳ ಪ್ರವೇಶಿಸುವಾಗ ಇರುವ ಮೇಲ್ಚಾವಣಿ ಚಪ್ಪರವನ್ನು ತೆಗೆಯಲಾಗುತ್ತಿದ್ದು, ದೊಡ್ಡದಾಗಿದ್ದ ಆರು ಕಂಬಗಳನ್ನು ತೆಗೆಯಲಾಗುತ್ತಿದೆ. ಈ ಮೂಲಕ ಒಳಾಂಗಣದಲ್ಲಿ ಒಂದಿಷ್ಟು ಸ್ಥಳಾವಕಾಶಕ್ಕೆ ಪ್ರಯತ್ನಿಸಲಾಗುತ್ತಿದೆ. ಇದರಿಂದಾಗಿ ದೇವಸ್ಥಾನ ಪ್ರವೇಶಿಸುವಾಗಲೇ ಗರ್ಭಗುಡಿ ನೇರ ಕಾಣಲಿದೆ.
ಅಷ್ಟಬಂಧಕ್ಕಿಂತ ಮುಂಚಿತವಾಗಿ ಗರ್ಭಗುಡಿಯ ಮೇಲ್ಚಾವಣಿ ದುರಸ್ತಿ, ತಾಮ್ರದ ಹೊದಿಕೆ, ನೂತನ ಧ್ವಜಸ್ತಂಭ ಸ್ಥಾಪನೆ ನಡೆಯಲಿದೆ. ಎರಡು ವರ್ಷಗಳಿಂದ ಧ್ವಜಸ್ತಂಭವನ್ನು ತೈಲಭಾಂಡದಲ್ಲಿಟ್ಟು ತೆಗೆಯಲಾಗಿದೆ. ಹೊರಗಡೆಯಲ್ಲಿ ರಕ್ತೇಶ್ವರಿ ಸನ್ನಿಧಿಯ ಜೀರ್ಣೋದ್ಧಾರ, ಒಳಗಿನ ಶಾಸ್ತಾರ, ನಾಗಸನ್ನಿಧಿ ಜೀರ್ಣೋದ್ಧಾರ, ಗಣಪತಿ ದೇವರ ಎದುರಿನ ದಳಿಯ ದುರಸ್ತಿ ಕಾರ್ಯಗಳು ಅಷ್ಟಬಂಧದ ಒಳಗೆ ನಡೆಯಲಿವೆ.
ಒಂದು ವರ್ಷದ ಬಳಿಕ ಅಂದರೆ 2020ರಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಒಂದು ವರುಷದ ಅವಧಿಯಲ್ಲಿ ನೂತನ ಧ್ವಜಸ್ತಂಭಕ್ಕೆ ಚಿನ್ನದ ಲ್ಯಾಮಿನೇಶನ್, ನೂತನ ಭೋಜನ ಶಾಲೆ ಮುಂತಾದ ಅಭಿವೃದ್ಧಿ ಕಾರ್ಯಗಳು ಆಗಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.