ADVERTISEMENT

ಕ್ರೈಸ್ತರ ‘ಕರುಣೆ’ ಗೆಲುವಿಗೆ ಕಾರಣ: ಸಚಿವ ಕೆ.ಜೆ ಜಾರ್ಜ್

‘ರಚನಾ’ದಿಂದ ಕ್ರೈಸ್ತ ಸಮುದಾಯದ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 4:26 IST
Last Updated 6 ಅಕ್ಟೋಬರ್ 2025, 4:26 IST
ಶೋಭಾ ಮೆಂಡೊನ್ಸ, ಗೋಡ್ವಿನ್ ರಾಡ್ರಿಗಸ್, ಆಸ್ಟಿನ್ ರೋಚ್, ಜೆ.ಆರ್ ಲೋಬೊ ಮತ್ತು ಪ್ರತಾಪ್ ಮೆಂಡೊನ್ಸ ಅವರಿಗೆ ‘ರಚನಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು‌. ಜಾನ್ ಸುನಿಲ್, ಜಾನ್ ಬಿ.ಮೊಂತೆರೊ, ಕೆ.ಜೆ ಜಾರ್ಜ್‌, ಫಾದರ್ ಪೀಟರ್ ಪಾಲ್ ಸಲ್ದಾನ, ಐವನ್ ಡಿಸೋಜ ಮತ್ತು ಸಿಂಥಿಯಾ ಮೆನೇಜಸ್ ಪಾಲ್ಗೊಂಡಿದ್ದರು. ಪ್ರಜಾವಾಣಿ ಚಿತ್ರ
ಶೋಭಾ ಮೆಂಡೊನ್ಸ, ಗೋಡ್ವಿನ್ ರಾಡ್ರಿಗಸ್, ಆಸ್ಟಿನ್ ರೋಚ್, ಜೆ.ಆರ್ ಲೋಬೊ ಮತ್ತು ಪ್ರತಾಪ್ ಮೆಂಡೊನ್ಸ ಅವರಿಗೆ ‘ರಚನಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು‌. ಜಾನ್ ಸುನಿಲ್, ಜಾನ್ ಬಿ.ಮೊಂತೆರೊ, ಕೆ.ಜೆ ಜಾರ್ಜ್‌, ಫಾದರ್ ಪೀಟರ್ ಪಾಲ್ ಸಲ್ದಾನ, ಐವನ್ ಡಿಸೋಜ ಮತ್ತು ಸಿಂಥಿಯಾ ಮೆನೇಜಸ್ ಪಾಲ್ಗೊಂಡಿದ್ದರು. ಪ್ರಜಾವಾಣಿ ಚಿತ್ರ   

ಮಂಗಳೂರು: ಕ್ರೈಸ್ತ ಸಮುದಾಯದ ಗುರುಗಳು, ಸಿಸ್ಟರ್‌ಗಳು ಮತ್ತಿತರರು ಮಾಡಿದ ಒಳ್ಳೆಯ ಕೆಲಸಗಳು ರಾಜಕೀಯವಾಗಿ ಬೆಳೆಯಲು ನನಗೆ ಪರೋಕ್ಷವಾಗಿ ಸಹಕಾರಿಯಾಗಿವೆ ಎಂದು ಸಚಿವ ಕೆ.ಜೆ ಜಾರ್ಜ್ ಹೇಳಿದರು. 

ಕ್ಯಾಥಲಿಕ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ‘ರಚನಾ’ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರೈಸ್ತ ಸಮುದಾಯದ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಕ್ರೈಸ್ತ ಎಂಬ ಕಾರಣಕ್ಕೆ ನನಗೆ ಜನರು ಮತ ಹಾಕಿದ್ದಾರೆ ಎಂದು ಹೇಳಲಾಗದು. ಸಮುದಾಯದವರು ಮಾಡಿದ ಒಳ್ಳೆಯ ಕಾರ್ಯವೇ ನನ್ನ ಗೆಲುವಿಗೆ ಕಾರಣ ಎಂದರು. 

ಕೊಂಕಣಿ ಕ್ರೈಸ್ತರ ಪೈಕಿ ಅತ್ಯುತ್ತಮ ರಾಜಕಾರಣಿಗಳು ರಾಜ್ಯದಲ್ಲಿ ಇದ್ದರು. ಮಾರ್ಗರೆಟ್ ಆಳ್ವ, ಆಸ್ಕರ್ ಫರ್ನಾಂಡಿಸ್, ಬ್ಲೇಸಿಯಸ್ ಡಿಸೊಜ, ಮೈಕೆಲ್ ಫರ್ನಾಂಡಿಸ್ ಮುಂತಾದವರು ಮಾದರಿ ರಾಜಕಾರಣ ಮಾಡಿದ್ದಾರೆ. ಮೈಕೆಲ್‌ ಫರ್ನಾಂಡಿಸ್ ಅವರಂಥ ಜಂಟಲ್‌ಮ್ಯಾನ್ ರಾಜಕಾರಣಿ ಎದುರು ಜಯ ಗಳಿಸಿದಾಗ ನಿಜವಾಗಿ ಬೇಸರವಾಗಿತ್ತು ಎಂದು ಜಾರ್ಜ್ ಹೇಳಿದರು.‌ 

ADVERTISEMENT

ಕಷ್ಟದಲ್ಲಿ ಇರುವವರಿಗೆ ನೆರವಾಗಿ ಎಂದು ಹೇಳಿದ ಏಸುಕ್ರಿಸ್ತನ ತತ್ವವನ್ನು ಪಾಲಿಸಿಕೊಂಡು ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರ ಸಂಕಷ್ಟಗಳಿಗೆ ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತಿದೆ. ಕೋವಿಡ್ ಕಾಡಿದ ನಂತರ ಕುಟುಂಬದ ಆದಾಯ ಕಡಿಮೆ ಆದದ್ದರಿಂದ ಗ್ಯಾರಂಟಿ ಯೋಜನೆಗಳು ಅನುಕೂಲಕರ ವಾತಾವರಣ ಸೃಷ್ಟಿಸಿವೆ ಎಂದ ಅವರು ಗೃಹಜ್ಯೋತಿಯಿಂದಾಗಿ ವಿದ್ಯುತ್‌ ಸಮಸ್ಯೆ ಉಂಟಾಗಲಿಲ್ಲ. ರಾಜ್ಯದಲ್ಲಿ ಈಗ ವಿದ್ಯುತ್ ಉಳಿತಾಯ ಆಗುತ್ತಿದ್ದು ಪವರ್‌ ಕಟ್‌ ಇಲ್ಲದೆ ಒಂದು ಕೋಟಿ 62 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದರು. 

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಫಾದರ್ ಪೀಟರ್ ಪಾಲ್ ಸಲ್ದಾನ, ಶಾಸಕ ಐವನ್ ಡಿಸೋಜ, ಉದ್ಯಮಿ ಜಾನ್ ಸುನಿಲ್, ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಭಾರ ಕುಲಪತಿ ಸಿಂಥಿಯಾ ಮೆನೇಜಸ್, ರಚನಾದ ಅಧ್ಯಕ್ಷ ಜಾನ್ ಬಿ.ಮೊಂತೆರೊ ಪಾಲ್ಗೊಂಡಿದ್ದರು. ಯುಲಾಲಿಯ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೆಳಗಾವಿಯ ಪ್ರಗತಿಪರ ಕೃಷಿಕ ಗೋಡ್ವಿನ್ ರಾಡ್ರಿಗಸ್, ಬೆಂಗಳೂರಿನ ಹೋಟೆಲ್ ಉದ್ಯಮಿ ಆಸ್ಟಿನ್ ರೋಚ್, ಮಂಗಳೂರಿನ ಜೆ.ಆರ್ ಲೋಬೊ, ದುಬೈಯ ಪ್ರತಾಪ್ ಮೆಂಡೊನ್ಸ ಮತ್ತು ಶೋಭಾ ಮೆಂಡೊನ್ಸ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗೋಡ್ವಿನ್ ರಾಡ್ರಿಗಸ್ ‘ಕೃಷಿ ಕ್ಷೇತ್ರವನ್ನು ಉಳಿಸುವ, ಬೆಳೆಸುವ ಮತ್ತು ಪ್ರೋತ್ಸಾಹಿಸುವ ತುರ್ತು ಈಗ ಉಂಟಾಗಿದೆ. ಆಹಾರ ತಿನ್ನುವ‌ ಮೊದಲು ಉಪವಾಸ ಇರುವವರ ಬಗ್ಗೆ ಯೋಚಿಸಬೇಕು, ಸಂಪನ್ಮೂಲಗಳನ್ನು ಹಾಳು ಮಾಡುವ ಮುನ್ನ ಭವಿಷ್ಯದ ಬಗ್ಗೆ ಯೋಚಿಸಬೇಕು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.