ಉಪ್ಪಿನಂಗಡಿ (ದಕ್ಷಿಣ ಕನ್ನಡ): ಕಡಬ ತಾಲ್ಲೂಕಿನಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಕೊಂಬಾರು ಗ್ರಾಮ ಮೆಟ್ಟುತ್ತಾರು ಮತ್ತು ಬಿರ್ಮೆರೆ ಗುಂಡಿ ಎಂಬಲ್ಲಿ ಎರಡು ಸೇತುವೆಗಳು ನಿರ್ಮಾಣವಾಗಿದ್ದು, ಸಂಪರ್ಕ ರಸ್ತೆಯೂ ಕಾಂಕ್ರಿಟೀಕರಣಗೊಂಡಿದೆ. ಜನಪ್ರತಿನಿಧಿಗಳಿಂದ ಕಡೆಗಣನೆಗೆ ಒಳಗಾಗಿದ್ದ ಕೊಂಬಾರು ಗ್ರಾಮಕ್ಕೆ ಈ ಸೌಕರ್ಯಗಳು ದಕ್ಕಿದ್ದು ಹೈಕೋರ್ಟ್ ಆದೇಶದಿಂದ ಎಂಬುದು ವಿಶೇಷ.
ಈ ಸೌಕರ್ಯಗಳಿಗಾಗಿ ಗ್ರಾಮದ ಮೂವರು ಯುವಕರ ತಂಡ ಸತತ 9 ವರ್ಷ ಕಾನೂನು ಹೋರಾಟ ನಡೆಸಿತ್ತು. ಈ ಯುವಕರ ಛಲದ ಫಲವಾಗಿ ನಿರ್ಮಾಣವಾಗಿರುವ ಸೇತುವೆಗಳನ್ನು ಹಾಗೂ ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ಇದೇ 24ರಂದು ಹೈಕೋರ್ಟ್ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಅವರಿಂದಲೇ ಲೋಕಾರ್ಪಣೆಗೊಳಿಸಲು ಗ್ರಾಮಸ್ಥರು ಸಿದ್ಧತೆ ನಡೆಸಿದ್ದಾರೆ.
ಮಳೆಗಾಲ ಬಂತೆಂದರೆ ಗ್ರಾಮದ ರಸ್ತೆ ಕೆಸರು ಗದ್ದೆಯಂತಾಗುತ್ತಿದ್ದವು. ಅದರಲ್ಲೇ 2 ಕಿ.ಮೀ. ನಡೆದು ತೊರೆಗಳನ್ನು ದಾಟಿಕೊಂಡು ಮನೆಯನ್ನು ತಲುಪಬೇಕಾದ ಸ್ಥಿತಿ ಇತ್ತು. ರೋಗಿಗಳನ್ನು ಹೊತ್ತುಕೊಂಡೇ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಊರಿನ ರಸ್ತೆಯನ್ನು ಅಭಿವೃದ್ಧಿಪಡಿಸಿ ಸೇತುವೆ ನಿರ್ಮಿಸುವಂತೆ ಜನಪ್ರತಿನಿಧಿಗಳಿಗೆ ಅನೇಕ ಸಲ ಮನವಿ ಕೊಟ್ಟರೂ ಪ್ರಯೋಜನವಾಗಿರಲಿಲ್ಲ. ಚುನಾವಣೆ ಬಂದಾಗ ‘ನಿಮ್ಮ ಬೇಡಿಕೆಯನ್ನು ಆದ್ಯತೆ ಮೇರೆಗೆ ಈಡೇರಿಸುತ್ತೇವೆ’ ಎನ್ನುತ್ತಿದ್ದ ರಾಜಕಾರಣಿಗಳು ನಂತರ ಅದನ್ನು ಮರೆತೇ ಬಿಡುತ್ತಿದ್ದರು ಎಂದು ತಮ್ಮ ಊರಿನಲ್ಲಿ ಹಿಂದೆ ಇದ್ದ ಪರಿಸ್ಥಿತಿಯನ್ನು ವಿವರಿಸುತ್ತಾರೆ ಈ ಸೌಕರ್ಯಗಳಿಗಾಗಿ ರಿಟ್ ಅರ್ಜಿ ಸಲ್ಲಿಸಿದ್ದ ಗುಣವಂತ ಕಟ್ಟೆ.
‘ಈ ಸೌಕರ್ಯಗಳಿಗಾಗಿ ಗ್ರಾಮ ಪಂಚಾಯಿತಿಯಿಂದ ಹಿಡಿದು, ಪ್ರಧಾನ ಮಂತ್ರಿ ಕಚೇರಿವರೆಗೂ ಮನವಿ ಸಲ್ಲಿಸಿದ್ದೆವು. ಮುಖ್ಯಮಂತ್ರಿ, ಸಚಿವರು, ಶಾಸಕರನ್ನು ಕೋರಿದ್ದೆವು. ಅವರು ಯಾರೂ ನಮ್ಮ ಅಹವಾಲಿಗೆ ಕಿವಿಗೊಡಲೇ ಇಲ್ಲ’ ಎಂದರು.
ಊರಿಗೆ ಸೇತುವೆ ಹಾಗೂ ಸುಸಜ್ಜಿತ ರಸ್ತೆಪಡೆದೇ ತೀರುತ್ತೇವೆ ಎಂದು ಪಣತೊಟ್ಟ ಸ್ಥಳೀಯರಾದ ಗುಣವಂತ ಕಟ್ಟೆ, ಮಂಜುನಾಥ ಕಟ್ಟೆ, ಭುವನೇಶ್ವರ ಅಮ್ಟೂರು ಸೇರಿಕೊಂಡು ‘ಕೊಂಬಾರು ಫಲಾನುಭವಿ ಸನ್ಮಿತ್ರ ಬಳಗ’ ಎಂಬ ತಂಡ ಕಟ್ಟಿಕೊಂಡರು. ಗ್ರಾಮಕ್ಕೆ ಸೇತುವೆ ಮತ್ತು ಸಂಪರ್ಕ ರಸ್ತೆ ನಿರ್ಮಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ 2006ರಲ್ಲಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಆದೇಶದ ಮೇರೆಗೆ ಸರ್ಕಾರ ಕೊಂಬಾರು ಗ್ರಾಮದ ಮೆಟ್ಟುತ್ತಾರು ಸೇತುವೆಗೆ ₹ 1 ಕೋಟಿ, ಬಿರ್ಮೆರೆ ಗುಂಡಿ ಕಿರು ಸೇತುವೆಗೆ ₹ 50 ಲಕ್ಷ ಹಾಗೂ ಸಿರಿಬಾಗಿಲು-ಮಣಿಭಾಂಡ-ಕೋಟಿಗುಡ್ಡೆ ಸಂಪರ್ಕಿಸುವ 1.25 ಕಿ.ಮೀ ಉದ್ದ ರಸ್ತೆ ಕಾಂಕ್ರಿಟೀಕರಣ ಮತ್ತು ತಡೆಗೋಡೆ ನಿರ್ಮಿಸಲು ₹ 81.50 ಲಕ್ಷ ಮಂಜೂರು ಮಾಡಿತ್ತು.
ಸೇತುವೆ ನಿರ್ಮಾಣಕ್ಕೆ, ರಸ್ತೆ ಕಾಂಕ್ರಿಟೀಕರಣಕ್ಕೆ ₹ 2.33 ಕೋಟಿ ವೆಚ್ಚ ಸೇತುವೆ, ರಸ್ತೆ ಲೋಕಾರ್ಪಣೆಗೆ ನ್ಯಾಯಾಧೀಶರಿಗೆ ಗ್ರಾಮಸ್ಥರಿಂದ ಆಹ್ವಾನ
ರಾಜಕಾರಣಿಗಳು ಗ್ರಾಮಸ್ಥರ ಬೇಡಿಕೆ ಈಡೇರಿಸಲೇ ಇಲ್ಲ. ಹಾಗಾಗಿ ನ್ಯಾಯಾಲಯದ ಮೂಲಕ ಸೇತುವೆಗಳು ಹಾಗೂ ರಸ್ತೆ ಸೌಕರ್ಯ ಪಡೆದುಕೊಂಡಿದ್ದೇವೆ.ಗುಣವಂತ ಕಟ್ಟೆ ಗ್ರಾಮಸ್ಥ
ಈ ಸೌಕರ್ಯಗಳನ್ನು ಪಡೆಯಲು ಗ್ರಾಮಸ್ಥರು 3 ಸಲ ರಿಟ್ ಅರ್ಜಿ 2 ಸಲ ನ್ಯಾಯಾಂಗ ನಿಂದನೆ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ನಡೆಸಬೇಕಾಯಿತುಕೆ.ಎನ್. ಪ್ರವೀಣ್ ಕುಮಾರ್ ವಕೀಲ
‘ನ್ಯಾಯಾಂಗ ನಿಂದನೆ ಅರ್ಜಿ ಬಳಿಕ ಅನುದಾನ ಬಿಡುಗಡೆ’ ಮೆಟ್ಟುತ್ತಾರು ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ 2015ರ ಸೆ. 22ರಂದು ಹೈಕೋರ್ಟ್ಗೆ ಗ್ರಾಮಸ್ಥರು ರಿಟ್ ಅರ್ಜಿ ಸಲ್ಲಿಸಿದ್ದರು. ಸೇತುವೆ ನಿರ್ಮಾಣಕ್ಕೆ ತಿಂಗಳೊಳಗೆ ಕ್ರಮವಹಿಸುವಂತೆ ಹೈಕೋರ್ಟ್ ಆದೇಶಿಸಿದ ಬಳಿಕವೂ ಸರ್ಕಾರ ಕ್ರಮ ವಹಿಸಲಿಲ್ಲ. ಗ್ರಾಮಸ್ಥರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರು. ಅದು ವಜಾಗೊಂಡಾಗ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಲಾಯಿತು. ಹೈಕೋರ್ಟ್ಗೆ ಮರುಮನವಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚಿಸಿತು. 2017ರಲ್ಲಿ ಹೊಸ ರಿಟ್ ಸಲ್ಲಿಸಲಾಯಿತು ಎಂದು ಹೋರಾಟದ ಕತೆ ಯನ್ನು ವಿವರಿಸುತ್ತಾರೆ ಹೈಕೋರ್ಟ್ ವಕೀಲ ಕೆ.ಎನ್. ಪ್ರವೀಣ್ ಕುಮಾರ್. ‘ಸೇತುವೆ ಕಾಮಗಾರಿಗೆ ₹ 40 ಲಕ್ಷ ಅನುದಾನ ಬಿಡುಗಡೆಯಾಗಿದೆ’ ಎಂದು ಸರ್ಕಾರ ಹೇಳಿದ್ದರಿಂದ ಆ ಅರ್ಜಿ ವಿಲೇವಾರಿಯಾಯಿತು. 2 ವರ್ಷ ಕಳೆದರೂ ಕಾಮಗಾರಿ ಶುರುವಾಗಲೇ ಇಲ್ಲ. ಗ್ರಾಮಸ್ಥರು ಮತ್ತೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರು. ಸ್ಪಷ್ಟ ನಿರ್ದೇಶನ ಕೋರಿ ಮತ್ತೊಂದು ರಿಟ್ ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚಿಸಿತು. ಆ ಅರ್ಜಿಗೆ ಸಂಬಂಧಿಸಿ ಹೈಕೋರ್ಟ್ ಆದೇಶ ನೀಡಿದ ಬಳಿ ಸರ್ಕಾರ ಮೆಟ್ಟುತ್ತಾರು ಸೇತುವೆಗೆ ₹ 1 ಕೋಟಿ ಬಿರ್ಮೆರೆ ಗುಂಡಿ ಸೇತುವೆ ಹಾಗೂ ರಸ್ತೆ ಅಭಿವೃದ್ಧಿಗೆ ₹ 1.31 ಕೋಟಿ ಬಿಡುಗಡೆ ಮಾಡಿತು. ಈ ಕಾಮಗಾರಿಗಳು ಮೂರು ತಿಂಗಳಲ್ಲಿ ಪೂರ್ಣಗೊಂಡಿವೆ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.