ಮಂಗಳೂರು: ಕೋವಿಡ್-19 ಪರಿಣಾಮ ಪೂರ್ಣ ಲಾಕ್ಡೌನ್ ಆಗಿರುವುದರಿಂದ ಕೊಂಕಣಿ ಭಾಷಿಕ ಬಡ ಕಲಾವಿದರು ಸಂಕಷ್ಟಕ್ಕೆ ಒಳಗಾಗಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಅರ್ಹ 138 ಫಲಾನುಭವಿಗಳನ್ನು ಗುರುತಿಸಿ ₹2 ಸಾವಿರ ಸಹಾಯಧನ ಒದಗಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ. ರವಿ ಅವರ ಸಹಯೋಗದಿಂದ ಅರ್ಹ ಪ್ರತಿ ಬಡ ಕಲಾವಿದರಿಗೆ ಕೋವಿಡ್-19 ಪರಿಹಾರಾರ್ಥವಾಗಿ ಮೊದಲ ಹಂತದಲ್ಲಿ ಸಹಾಯಧನ ₹ 2 ಸಾವಿರ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.
ಈ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾನವೀಯತೆ ಮೆರೆದಿದೆ. ಸಹಕಾರ ನೀಡಿದ ಸಚಿವ ಸಿ.ಟಿ ರವಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಜನ್ನು, ನಿರ್ದೇಶಕರಾದ ಎಸ್. ರಂಗಪ್ಪ, ರಾಜೇಶ್, ರಿಜಿಸ್ಟ್ರಾರ್ ಕುಮಾರ್ ಬೆಕ್ಕೇರಿ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಅಕಾಡೆಮಿ ಅಧ್ಯಕ್ಷ ಡಾ.ಜಗದೀಶ್ ಪೈ ತಿಳಿಸಿದ್ದಾರೆ.
ಈಗಾಗಲೇ ಇನ್ನಷ್ಟು ಬಡ ಕಲಾವಿದರಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಇನ್ನೊಂದು ಹಂತದಲ್ಲಿ ಅರ್ಹ ಫಲಾನುಭವಿಗಳ ಬಗ್ಗೆ ಪರಿಶೀಲಿಸಿ ಹಣ ಬಿಡುಗಡೆ ಮಾಡುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.