ಮಂಗಳೂರು: ಕರ್ನಾಟಕ ಕೊಂಕಣಿ ಭಾಶಾ ಮಂಡಳ್ ಸಂಘಟನೆಯು ಸುವರ್ಣ ಮಹೋತ್ಸವದ ನೆನಪಿನಲ್ಲಿ ಐದು ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಕೊಂಕಣಿ ಭಾಷೆಗಾಗಿ ದುಡಿದ ರಾಮದಾಸ್ ಗುಲ್ವಾಡಿ ಅವರಿಗೆ ‘ಜೀವಮಾನ ಪ್ರಶಸ್ತಿ’, ನಾಟಿ ವೈದ್ಯೆಯಾದ ಕಲ್ಯಾಣಿಬಾಯಿ ನೀರ್ಕೆರೆ ಅವರಿಗೆ ‘ಜಾನಪದ ಪ್ರಶಸ್ತಿ’, ಕೊಂಕಣಿ ವಾರಪತ್ರಿಕೆ ನಡೆಸುತ್ತಿರುವ ಸಾಗರದ ಅಪ್ಪುರಾಯ ಪೈ ಅವರಿಗೆ ‘ಕೊಂಕಣಿ ಕಾರ್ಯಕರ್ತ ಪ್ರಶಸ್ತಿ’, ಕೊಂಕಣಿ ಚಿತ್ರನಟ ಕ್ಲಾನ್ವಿನ್ ಫರ್ನಾಂಡಿಸ್ ಅವರಿಗೆ ‘ಯುವ ಪ್ರಶಸ್ತಿ’ ಹಾಗೂ ಮೊದಲ ಕೊಂಕಣಿ ಕೃತಿ ಪ್ರಕಟಿಸಿದ ಕೃತಿಕಾ ಕಾಮತ್ ಅವರಿಗೆ ‘ಪುಸ್ತಕ ಪ್ರಶಸ್ತಿ’ ಘೋಷಿಸಲಾಗಿದೆ. ಈ ಗೌರವ ಪ್ರಶಸ್ತಿಯು ಸ್ಮರಣಿಕೆ, ಶಾಲು, ಫಲಕಗಳನ್ನು ಒಳಗೊಂಡಿದೆ.
ಜ.9ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯುವ ‘ಭಾಂಗಾರೋತ್ಸವ್’ ಸಮಾರೋಪ ಸಮಾರಂಭದಲ್ಲಿ ಐವರಿಗೆ ಪ್ರಶಸ್ತಿ ಪ್ರದಾನ ಹಾಗೂ ಕೊಂಕಣಿ ಭಾಷೆಗಾಗಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ವಿವಿಧ ಭಾಗಗಳ 50 ಕೊಂಕಣಿ ಭಾಷಿಕರನ್ನು ಸನ್ಮಾನಿಸಲಾಗುತ್ತದೆ ಎಂದು ಭಾಶಾ ಮಂಡಳ್ ಅಧ್ಯಕ್ಷ ಕೆ. ವಸಂತ ರಾವ್ ತಿಳಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘಟನೆಯ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಐದು ಪ್ರಶಸ್ತಿಗಳನ್ನು ನೀಡಲಾಗುವುದು. ಕೆಪಿಎಸ್ಸಿ ಸದಸ್ಯ ರೊನಾಲ್ಡ್ ಫರ್ನಾಂಡಿಸ್, ಕೊಂಕಣಿ ಭಾಶಾ ಮಂಡಳ್ ಸ್ಥಾಪಕ ಖಜಾಂಚಿ ಮಾರ್ಕ್ ವಾಲ್ಡರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಮನೋಹರ ಕಾಮತ್, ಉದ್ಯಮಿ ಪ್ರಶಾಂತ್ ಶೇಟ್ ಭಾಗವಹಿಸುವರು ಎಂದರು.
ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ, ಪ್ರಮುಖರಾದ ಅರವಿಂದ ಶಾನುಭಾಗ್, ಪ್ರಶಾಂತ್ ಶೇಟ್, ಖಜಾಂಚಿ ಸುರೇಶ್ ಶೆಣೈ, ಉಪಾಧ್ಯಕ್ಷ ರತ್ನಾಕರ ಕುಡ್ವ, ಜೂಲಿಯೆಟ್ ಫರ್ನಾಂಡಿಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.