ಮಂಗಳೂರು: ನಿಟ್ಟೆ ಎಜುಕೇಶನ್ ಟ್ರಸ್ಟ್ನ ಅಟಲ್ ಇನ್ಕ್ಯುಬೇಷನ್ ಸೆಂಟರ್ ವತಿಯಿಂದ ಕರ್ಣಾಟಕ ಬ್ಯಾಂಕ್ ಸಹಯೋಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಯುವ ಉದ್ಯಮಿಗಳಿಗೆ ನವೋದ್ಯಮ ವ್ಯವಸ್ಥೆಗೆ ಉತ್ತೇಜನ ನೀಡಲು ‘ಕೌನ್ ಬನೇಗಾ ಉದ್ಯಮಪತಿ’ ಸ್ಪರ್ಧೆ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಿಟ್ಟಿ ಎಐಸಿ ಮುಖ್ಯ ಮಾರ್ಗದರ್ಶಕ ಎಸ್.ಎಸ್. ನಾಯಕ್, ಪ್ರಾದೇಶಿಕ ಮಟ್ಟದಲ್ಲಿ ಸ್ಟಾರ್ಟ್ ಅಪ್ ಬೆಳವಣಿಗೆಗೆ ವೇದಿಕೆ ಒದಗಿಸಿ, ರಾಷ್ಟ್ರೀಯ ಮಟ್ಟದಲ್ಲಿ ಈ ಉದ್ಯಮಶೀಲತೆಯನ್ನು ಬೆಳೆಸುವ ಗುರಿ ಹೊಂದಲಾಗಿದೆ ಎಂದರು.
ಬಯೋಟೆಕ್, ಮೆಡಿಟೆಕ್, ಅಗ್ರಿಟೆಕ್, ಇಂಧನ ಮತ್ತು ಸಾಫ್ಟ್ವೇರ್ ಆ್ಯಸ್ ಸರ್ವಿಸ್ ಈ ಉದ್ದಿಮೆಗಳ ಕುರಿತಾದ ವಿಚಾರಕ್ಕೆ ಮುಕ್ತವಾಗಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಸೇರಿದ ಉದ್ಯಮಗಳು, ಸಂಶೋಧನಾ ತಂಡಗಳು ಅಥವಾ ವ್ಯಕ್ತಿಗತ ಉದ್ದಿಮೆದಾರರು (40 ವರ್ಷ ವಯೋಮಿತಿ) ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಎಂದು ವಿವರಿಸಿದರು.
ಶಾರ್ಟ್ ಲಿಸ್ಟ್ ಮಾಡಿದ 25 ಐಡಿಯಾಗಳಿಗೆ ಗ್ರೂಮಿಂಗ್ ಎಕ್ಸ್ಪರ್ಟ್, ಇಮೇಜ್ ಮತ್ತು ಬ್ರ್ಯಾಂಡಿಂಗ್ ಕನ್ಸಲ್ಟಂಟ್ಗಳು ವ್ಯಕ್ತಿತ್ವ ವಿಕಸನ ಮತ್ತು ಪ್ರೊಫೈಲಿಂಗ್ ಕೋಚ್ಗಳಿಂದ ಓರಿಯಂಟೇಶನ್ ಮತ್ತು ತರಬೇತಿ ಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ. ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಐದು ಸಂಚಿಕೆಗಳಲ್ಲಿ ಟಿವಿಯಲ್ಲಿ ಪ್ರಸಾರವಾಗಲಿದ್ದು, ಪ್ರತಿ ಸಂಚಿಕೆಯಲ್ಲಿ ಒಬ್ಬ ವಿಜೇತರನ್ನು ಘೋಷಿಸಲಾಗುತ್ತದೆ. ವಿಜೇತರು ನಗದು ಬಹುಮಾನದ ಜತೆಗೆ ₹25 ಲಕ್ಷದವರೆಗೆ ಸೀಡ್ ಕ್ಯಾಪಿಟಲ್ ಮತ್ತು ಒಂದು ವರ್ಷದವರೆಗೆ ಉಚಿತ ಇನ್ಕ್ಯುಬೇಷನ್ ಪಡೆಯಲಿದ್ದಾರೆ. ಅ.20 ನೋಂದಣಿಗೆ ಕೊನೆಯ ದಿನಾಂಕ. ಸ್ಪರ್ಧೆಯ ವಿವರಗಳನ್ನು https://aicnitte.com/kbu/ನಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ. 8660072597 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.
ನಿಟ್ಟೆ ಎಐಸಿ ಸಿಇಒ ಡಾ. ಅನಂತ ಪದ್ಮನಾಭ ಆಚಾರ್, ಕರ್ಣಾಟಕ ಬ್ಯಾಂಕ ಮಹಾಪ್ರಬಂಧಕ ವಿನಾಯಕ್ ಭಟ್ ಪಿ.ಜೆ. ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.