ADVERTISEMENT

ಪರಿಸರ ಸಂರಕ್ಷಣೆ ಸವಾಲು ಎದುರಿಸಲು ತಾಂತ್ರಿಕ ನೆರವು

ಕೆಎಸ್‌ಪಿಸಿಬಿ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಪಿ.ಎಂ. ನರೇಂದ್ರ ಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 7:07 IST
Last Updated 14 ಅಕ್ಟೋಬರ್ 2025, 7:07 IST
ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ನಿತಿನ್‌ ವಾಜ್‌, ಜೀತ್ ಮಿಲನ್ ರೋಚ್‌ ಹಾಗೂ ಜಯಪ್ರಕಾಶ್‌ ಎಕ್ಕೂರು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು
ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ನಿತಿನ್‌ ವಾಜ್‌, ಜೀತ್ ಮಿಲನ್ ರೋಚ್‌ ಹಾಗೂ ಜಯಪ್ರಕಾಶ್‌ ಎಕ್ಕೂರು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು   

ಮಂಗಳೂರು: ‘ಕೈಗಾರಿಕೆಗಳು, ಬಂದರುಗಳು, ನಗರೀಕರಣದಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಅನೇಕ ಸವಾಲುಗಳಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಲು ತಾಂತ್ರಿಕ ಸಹಾಯ ಒದಗಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಬದ್ಧ’ ಎಂದು ಮಂಡಳಿಯ ಅಧ್ಯಕ್ಷ ಮತ್ತು ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪರಿಸರ ಸಂರಕ್ಷಣೆಯ ಮಹತ್ವ ಅರಿತಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮುಂದಾಲೋಚನೆಯ ಫಲವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಜನ್ಮತಳೆದಿದೆ. ಮಂಡಳಿಯ ನೇತೃತ್ವದಲ್ಲಿ ನಡೆಯುವ ಸ್ವಚ್ಛತಾ ಅಭಿಯಾನದಡಿ ಕೊಲ್ಲೂರು ಸ್ನಾನಘಟ್ಟ ಪ್ರದೇಶದಲ್ಲಿ 0.5 ಟನ್, ಮಲ್ಪೆ  ಕಿನಾರೆಯಲ್ಲಿ 2.5 ಟನ್‌, ಕಾಪು ಕಿನಾರೆಯಲ್ಲಿ 1.8 ಟನ್‌ ಕಸ ಸಂಗ್ರಹಿಸಲಾಗಿದೆ’ ಎಂದರು.

ADVERTISEMENT

‘ಪ್ರತಿ ಗ್ರಾಮ ಪಂಚಾಯಿತಿಗಳ ಕಸ ವಿಲೇವಾರಿಗೆ 4 ಕಸ ಸಂಸ್ಕರಣಾ ಘಟಕಗಳಿರುವ ಏಕೈಕ ಜಿಲ್ಲೆ ದಕ್ಷಿಣ ಕನ್ನಡ. ಈ  ಘಟಕಗಳಲ್ಲಿ ಪಡೆದ 1.7 ಲಕ್ಷ ಕೆ.ಜಿ ಪ್ಲಾಸ್ಟಿಕ್ ಅನ್ನು ರಸ್ತೆ ನಿರ್ಮಿಸಲು ಬಳಸಿದ್ದು ಇತರರಿಗೂ ಮಾದರಿ. ಕರಾವಳಿಯಲ್ಲಿ ಗಣೇಶ ಚತುರ್ಥಿಗೆ  ಮಣ್ಣಿನ  ಮೂರ್ತಿ ಮಾತ್ರ ಬಳಸುವುದು ಶ್ಲಾಘನೀಯ. ದೀಪಾವಳಿಯಲ್ಲೂ ಜನ ಹಸಿರು ಪಟಾಕಿ ಮಾತ್ರ ಬಳಸಬೇಕು‘ ಎಂದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ, ‘ಮಳೆನೀರು ಹರಿಯುವ ಕಾಲುವೆಗಳಲ್ಲಿ ನಗರದಲ್ಲಿ ಕೊಳಚೆ ನೀರು ಹರಿಯುತ್ತಿದೆ.  ಅನೇಕ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ನಗರದ ಕೊಳಚೆ ನೀರಿನ  ವೈಜ್ಞಾನಿಕ ಶುದ್ಧೀಕರಣಕ್ಕೆ ಕ್ರಮವಹಿಸುವ ಅಗತ್ಯವಿದೆ’ ಎಂದರು.

ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ದ.ಕ. ಜಿಲ್ಲೆಯ ಜಯಪ್ರಕಾಶ್ ಎಕ್ಕೂರು, ಜೀತ್ ಮಿಲನ್‌ ರೋಚ್‌, ಪೇಪರ್ ಸೀಡ್ ಸಂಸ್ಥೆಯ ನಿತಿನ್ ವಾಜ್‌, ಉಡುಪಿ ಜಿಲ್ಲೆಯ ಪಂಚವರ್ಣ ಯುವಕ ಮಂಡಲ, ಎಚ್.ಎನ್. ಉದಯಶಂಕರ್ ಮತ್ತು ರತ್ನಾಕರ್ ಸಾಮಂತ್‌ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಡಾ.ವೈ.ಭರತ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಎಸ್. ಲಿಂಗರಾಜು, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರವಾಡೆ ವಿನಾಯಕ ಕಾರ್ಬಾರಿ, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಂಡಳಿ ಸದಸ್ಯ ಮರಿಸ್ವಾಮಿ ಗೌಡ,  ಶಾಲೆಟ್ ಪಿಂಟೊ  ಮೊದಲಾದವರು ಭಾಗವಹಿಸಿದ್ದರು.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟೊನಿ ಮರಿಯಪ್ಪ ಸ್ವಾಗತಿಸಿದರು. ಪರಿಸರ ಅಧಿಕಾರಿ ಲಕ್ಷ್ಮೀಕಾಂತ್‌ ಧನ್ಯವಾದ ಸಲ್ಲಿಸಿದರು.  ಉಪ ಪರಿಸರ ಅಧಿಕಾರಿ ಮಹೇಶ್ವರಿ ಇದ್ದರು. ಆರ್.ಜೆ.ಪ್ರಸನ್ನ ನಿರೂಪಿಸಿದರು. 

ಇಕೋ ಪಾರ್ಕ್‌: ಬಾಕಿ ಹಣ ಬಿಡುಗಡೆಗೆ ಒತ್ತಾಯ

  ಪಿಲಿಕುಳ ನಿಸರ್ಗಧಾಮದಲ್ಲಿ ಅರ್ಬನ್‌ ಇಕೋ ಪಾರ್ಕ್‌ ಯೋಜನೆಯಡಿ 18 ಕೋಟಿ ಮಂಜೂರಾಗಿದ್ದು ₹ 5 ಕೋಟಿ ಮಾತ್ರ ಬಿಡುಗಡೆಯಾಗಿದೆ. ಬಾಕಿ ₹ 13 ಕೋಟಿಯನ್ನು ಕೆಎಸ್‌ಪಿಸಿಬಿ ಬಿಡುಗಡೆ ಮಾಡಬೇಕು. ಜಿಲ್ಲೆಯ ಪರಿಸರ ಸಂರಕ್ಷಣೆಗೆ ಸಹ್ಯಾದ್ರಿ ಕಾಲೇಜಿನಲ್ಲಿ ಉತ್ಕೃಷ್ಟತಾ ಕೇಂದ್ರ ( ಸೆಂಟರ್ ಆಫ್‌ ಎಕ್ಸೆಲೆನ್ಸ್‌) ಸ್ಥಾಪಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಮಂಜುನಾಥ್ ಭಂಡಾರಿ ಒತ್ತಾಯಿಸಿದರು. ‘ನಾನು ಅರಣ್ಯ ಮತ್ತು ಪರಿಸರ ಅಭಿವೃದ್ದಿ ಸಚಿವನಾಗಿದ್ದಾಗ ರೂಪಿಸಿದ್ದ ಅರ್ಬನ್ ಎಕೋ ಪಾರ್ಕ್‌ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಅದನ್ನು ಪೂರ್ಣಗೊಳಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ರಮಾನಾಥ ರೈ ಕೋರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.