ಮಂಗಳೂರು: ಹಲವು ದಿನಗಳ ನಿರೀಕ್ಷೆಯ ನಂತರ ಕೊನೆಗೂ ಕುವೈತ್ನಿಂದ 114 ಪ್ರಯಾಣಿಕರು ತಾಯ್ನಾಡಿಗೆ ಮರಳಿದ್ದಾರೆ. ಗುರುವಾರ ಬೆಳಗಿನ ಜಾವ 2.30ಕ್ಕೆ ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಬಂದಿಳಿದಿದೆ.
ಕುವೈತ್ನಲ್ಲಿರುವ ಅನಿವಾಸಿ ಭಾರತೀಯರು ತವರಿಗೆ ಮರಳಲು ಕಳೆದ 45 ದಿನಗಳಿಂದ ಪ್ರಯತ್ನಿಸುತ್ತಲೇ ಇದ್ದರು. ಬಾಡಿಗೆ ವಿಮಾನವನ್ನು 45 ದಿನಗಳ ಹಿಂದೆಯೇ ವ್ಯವಸ್ಥೆ ಮಾಡಲಾಗಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ದ ಒಪ್ಪಿಗೆಗಾಗಿ ಕಾಯುವಂತಾಗಿತ್ತು.
ಕುವೈತ್ನ ಅಲ್ ರಶೀದ್ ಅವರು ಕಾದಿರಿಸಿದ್ದ ಈ ಬಾಡಿಗೆ ವಿಮಾನ ಜೂನ್ 22 ರಂದೇ ಪ್ರಯಾಣ ಆರಂಭಿಸಬೇಕಿತ್ತು. ಆದರೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅನುಮತಿ ನಿರಾಕರಿಸಿತ್ತು. ಕುವೈತ್ನಲ್ಲಿರುವ ಅನಿವಾಸಿ ಭಾರತೀಯ ಮೋಹನ್ದಾಸ್ ಕಾಮತ್ ಅವರು, ಈ ಬಗ್ಗೆ ಕುವೈತ್ನ ರಾಯಭಾರ ಕಚೇರಿ ಮಾಜಿ ಸಲಹೆಗಾರ್ತಿ ಆರತಿ ಕೃಷ್ಣ ಅವರಿಗೆ ಮನವಿ ಮಾಡಿದ್ದರು. ಆರತಿ ಅವರು ಡಿಜಿಸಿಎ ಅಧಿಕಾರಿಗಳು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದ್ದರು.
ಕುವೈತ್ನಿಂದ ಹಿಂದಿರುಗಲು 500 ಜನ ಅನಿವಾಸಿ ಭಾರತೀಯರಿಗೆ ಇದೇ 9 ರಂದು ಡಿಜಿಸಿಎ ಅನುಮತಿ ನೀಡಿತ್ತು. ಆದರೆ, ವಿಜಯವಾಡಾ, ನವದೆಹಲಿಗೆ ತೆರಳುವ ವಿಮಾನಗಳು ಆಗಲೇ ನಿಗದಿಯಾಗಿದ್ದು, ಮಂಗಳೂರಿಗೆ ಬರುವ ವಿಮಾನದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೇ ಇರುವುದರಿಂದ ಡಿಜಿಸಿಎ ಮತ್ತೊಮ್ಮೆ ಅನುಮತಿ ನಿರಾಕರಿಸಿತ್ತು. ಕೊನೆಗೆ ಆರತಿ ಕೃಷ್ಣ ಅವರು, ಡಿಜಿಸಿಎ ಅಧಿಕಾರಿಗಳ ಜತೆಗೆ ಸುದೀರ್ಘ ಚರ್ಚೆ ನಡೆಸಿದ ನಂತರ, ಇದೇ 12 ರಂದು ಸಂಜೆ 6 ಗಂಟೆಗೆ ಡಿಜಿಸಿಎ ಅನುಮತಿ ದೊರೆಯಿತು.
ರಾತ್ರಿ 9.50ಕ್ಕೆ ಕುವೈತ್ನಿಂದ ಹೊರಟ ಈ ವಿಮಾನದಲ್ಲಿ 3 ಶಿಶುಗಳು ಹಾಗೂ 114 ಪ್ರಯಾಣಿಕರು ನಗರಕ್ಕೆ ಬಂದಿಳಿದಿದ್ದಾರೆ. ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.