ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ನೀರು ಸರಬರಾಜು ವ್ಯವಸ್ಥೆಯಲ್ಲಿ ಸಮಸ್ಯೆಯಾಗಿರುವ ವಿಷಯ ತಿಳಿದ ಶಾಸಕ ವೇದವ್ಯಾಸ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಲೇಡಿಗೋಷನ್ ಆಸ್ಪತ್ರೆಯ ಸಂಪಿನಿಂದ ಮೇಲಿನ ಟ್ಯಾಂಕಿಗೆ ನೀರು ಸರಬರಾಜು ಮಾಡಲು ಎರಡು ಪಂಪ್ ಅಳವಡಿಸಲಾಗಿತ್ತು. ಅದರಲ್ಲಿ ಒಂದು ಪಂಪ್ ಹಾಳಾದ ಕಾರಣ ಮತ್ತೊಂದು ಪಂಪಿನ ಮೂಲಕ ನೀರು ಸರಬರಾಜು ಮಾಡಲಾಗುತಿತ್ತು. ಆದರೆ, ಭಾನುವಾರ ಬೆಳಿಗ್ಗೆ ಚಾಲನೆಯಲ್ಲಿದ್ದ ಪಂಪ್ ಹಾಳಾಗಿ ನೀರು ಸರಬರಾಜಿಗೆ ಸಮಸ್ಯೆ ಉಂಟಾಯಿತು’ ಎಂದು ವೇದವ್ಯಾಸ ಕಾಮತ್ ತಿಳಿಸಿದರು.
‘ಲಾಕ್ಡೌನ್ ಕಾರಣ ಅಗತ್ಯ ಸಾಮಗ್ರಿಗಳು ದೊರೆಯದೆ ದುರಸ್ತಿ ಮಾಡಲು ವಿಳಂಬವಾಗಿತ್ತು. ತಕ್ಷಣವೇ ಹೊಸ ಪಂಪ್ ಅಳವಡಿಸಿ, ಸಮಸ್ಯೆ ನಿವಾರಿಸಲಾಗಿದೆ. ಈ ವಿಚಾರದಲ್ಲಿ ರಾಜಕೀಯ ಎಳೆದು ತರುವ ಅವಶ್ಯಕತೆ ಇಲ್ಲ’ ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ‘ನೀರು ಸರಬರಾಜು ವ್ಯವಸ್ಥೆಯಲ್ಲಿ ಪಾಲಿಕೆಯಿಂದ ಅಥವಾ ಆಸ್ಪತ್ರೆಯಿಂದ ಯಾವುದೇ ರೀತಿಯ ಲೋಪವಾಗಿಲ್ಲ. ಹೊಸ ಪಂಪ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ’ ಎಂದರು.
ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಂದೀಪ್ ಗರೋಡಿ, ಸ್ಥಳೀಯ ಕಾರ್ಪೊರೇಟರ್ ಪೂರ್ಣಿಮಾ, ಆಸ್ಪತ್ರೆ ಡಿಎಂಒ ದುರ್ಗಾಪ್ರಸಾದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.