ADVERTISEMENT

ಸಾಮಾಜಿಕ ಸಮಸ್ಯೆಗೆ ಸ್ಪಂದಿಸಿ

ವಕೀಲರಿಗೆ ಹೈಕೋರ್ಟ್ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 16:06 IST
Last Updated 9 ಏಪ್ರಿಲ್ 2022, 16:06 IST
ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರವನ್ನು ಹೈಕೋರ್ಟ್ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಉದ್ಘಾಟಿಸಿದರು.
ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರವನ್ನು ಹೈಕೋರ್ಟ್ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಉದ್ಘಾಟಿಸಿದರು.   

ಮಂಗಳೂರು: ವಕೀಲರು ತಮ್ಮ ಕರ್ತವ್ಯದ ಜತೆಗೆ ಸಾಮಾಜಿಕ ಸಮಸ್ಯೆಗೆ ಸ್ಪಂದಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಹೇಳಿದರು.

ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ವಿಭಾಗ, ಎಸ್‌ಡಿಎಂ ಕಾನೂನು ಕಾಲೇಜಿನ ಕಾನೂನು ಸೇವಾ ಘಟಕದ ಆಶ್ರಯದಲ್ಲಿ ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕಾನೂನು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯೂ ವಕೀಲರು ಮಹತ್ತರ ಪಾತ್ರ ವಹಿಸಿದ್ದರು. ವಕೀಲರಾಗಿದ್ದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ ಸೇರಿದಂತೆ ಅನೇಕ ವಕೀಲರು ಮುಂಚೂಣಿಯಲ್ಲಿದ್ದರು. ಇಂತಹ ಘನತೆಯುಳ್ಳ ವೃತ್ತಿಯನ್ನು ಮಾಡುತ್ತಿರುವ ಇಂದಿನ ಯುವ ವಕೀಲರು ಸಹ ಸಮಾಜದ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗಮನ ಹರಿಸಬೇಕು ಎಂದರು.

ಆಧುನಿಕ ವೈದ್ಯಕೀಯ ತಂತ್ರಜ್ಞಾನ ಬಳಕೆಯಲ್ಲಿನ ಅಪಾಯಗಳಿಂದ ಹಿಡಿದು, ವೈವಾಹಿಕ ಸಂಬಂಧಗಳ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿಯವರೆಗೆ ಎಲ್ಲ ಸಂದರ್ಭಗಳಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಕಾನೂನುಗಳು ಎಷ್ಟಿದ್ದರೂ ಜನರ ಮನ:ಸ್ಥಿತಿಯಲ್ಲಿ ಪರಿವರ್ತನೆ ಬರಬೇಕು. ವಕೀಲರು ಆಸಕ್ತಿ ತೋರಿದಾಗ ಜಟಿಲ ಸಮಸ್ಯೆಗಳನ್ನು ಸರಳವಾಗಿ ಬಗೆಹರಿಸಬಹುದು ಎಂದರು. ಅಧಿವಕ್ತಾ ಪರಿಷತ್‌ನ ರಾಜ್ಯ ಅಧ್ಯಕ್ಷ ರವೀಂದ್ರನಾಥ ಪಿ.ಎಸ್., ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ನರಸಿಂಹ ಹೆಗ್ಡೆ, ವಕೀಲೆ ಪುಷ್ಪಲತಾ, ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ತಾರನಾಥ ಶೆಟ್ಟಿ ಇದ್ದರು.

ಅಧಿವಕ್ತಾ ಪರಿಷತ್‌ನ ವಲಯ ಕಾರ್ಯದರ್ಶಿ ಎಲ್.ಎನ್. ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಗುರುಪ್ರಸಾದ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.