ADVERTISEMENT

ಮಂಗಳೂರು: ಅಂತರರಾಷ್ಟ್ರೀಯ ತುಳು ಗೋಷ್ಠಿ ರದ್ದಿಗೆ ವ್ಯಾಪಕ ಖಂಡನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 9:52 IST
Last Updated 1 ನವೆಂಬರ್ 2020, 9:52 IST

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ತುಳುಗೋಷ್ಠಿ ರದ್ದುಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ತುಳು ವಿಚಾರಗೋಷ್ಠಿಗೆ ದೆಹಲಿ ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಅವರನ್ನು ಆಹ್ವಾನಿಸಲಾಗಿದ್ದು, ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಸದಸ್ಯರೊಬ್ಬರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎನ್ನಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ವಿರೋಧ ವ್ಯಕ್ತಪಡಿಸಿದ ಸಿಂಡಿಕೇಟ್ ಸದಸ್ಯರ ಹೆಸರು ಬಹಿರಂಗಪಡಿಸಬೇಕು ಹಾಗೂ ಗೋಷ್ಠಿಯನ್ನು ರದ್ದು ಮಾಡಲು ನಿರ್ಧರಿಸಿದವರ ಹೆಸರನ್ನೂ ಬಹಿರಂಗಪಡಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

'ನಮ್ಮ ಮಂಗಳೂರು ವಿಮಾನ ನಿಲ್ದಾಣವನ್ನು ಮಾರಿದ್ದರ ಬಗ್ಗೆ ವಿರೋಧ ಇಲ್ಲ, ಆದರೆ ಕನ್ನಡ , ತುಳುವಿಗೆ ಶ್ರಮಿಸಿದ ಬಿಳಿಮಲೆ ಸರ್ ಭಾಗವಹಿಸುತ್ತಾರೆ ಅನ್ನೋದಕ್ಕೆ ವಿರೋಧ' ಎಂಬಿತ್ಯಾದಿ ಆಕ್ರೋಶದ ಹೇಳಿಕೆಗಳನ್ನು ಜಾಲ ತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ.

ADVERTISEMENT

'ಗೋಷ್ಠಿ ರದ್ದಾದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ತಾಂತ್ರಿಕ ಕಾರಣಕ್ಕೆ ಮುಂದೂಡಿರಬೇಕು' ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.