ಮಂಗಳೂರು: ನಗರದ ರಸ್ತೆಗಳಲ್ಲಿ ಭಾನುವಾರ ಮುಂಜಾನೆ ಟ್ರಿಣ್ ಟ್ರಿಣ್ ಸದ್ದು ಮೊಳಗಿತು. ಚುಮುಚುಮು ಚಳಿಯನ್ನು ಲೆಕ್ಕಿಸದೇ ಶಾಲಾ ಕಾಲೇಜು ವಿದ್ಯಾರ್ಥಿಗಳು, ವೃತ್ತಿಪರರು, ಬೇರೆ ಬೇರೆ ಸೈಕ್ಲಿಂಗ್ ಕ್ಲಬ್ಗಳ ವೃತ್ತಿಪರ ಸೈಕ್ಲಿಸ್ಟ್ಗಳು ಸೇರಿ 1220 ಮಂದಿ ಸೈಕಲ್ ಸವಾರಿ ನಡೆಸಿದರು.
ವಿ.ಆರ್ ಸೈಕ್ಲಿಂಗ್, ಕ್ರಾಸ್ ಬೈಕ್ಸ್, ಐಡಿಯಲ್ ಐಸ್ಕ್ರೀಂ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಗಳ ಆಶ್ರಯದಲ್ಲಿ ರಸ್ತೆ ಸುರಕ್ಷತೆ ಹಾಗೂ ಸೈಕಲ್ಗಳ ಸಮರ್ಪಕ ನಿರ್ವಹಣೆ ಜಾಗೃತಿಗಾಗಿ ನಗರದಲ್ಲಿ ಏರ್ಪಡಿಸಿದ್ದ ‘ಮಂಗಳೂರು ಸೈಕ್ಲೊಥಾನ್ 2024’ ಇದಕ್ಕೆ ಅವಕಾಶ ಕಲ್ಪಿಸಿತು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಸೈಕ್ಲೊಥಾನ್ ಉದ್ಘಾಟಿಸಿದರು. ಮಂಗಳಾ ಕ್ರೀಡಾಂಗಣದ ಬಳಿಯಿಂದ ಹೊರಟ ಸೈಕಲ್ಗಳು ನಾರಾಯಣಗುರು ವೃತ್ತ– ಲಾಳ್ಬಾಗ್– ಜೈಲು ರಸ್ತೆ– ಕರಂಗಲಪಾಡಿ ಮಾರುಕಟ್ಟೆ– ಪಿವಿಎಸ್ ವೃತ್ತ– ಬಲ್ಲಾಳ್ಬಾಗ್– ಮಣ್ಣಗುಡ್ಡೆ– ಬರ್ಕೆ– ಮಠದಕಣಿ ಮೂಲಕ ಬೋಳೂರು ಅಮೃತವಿದ್ಯಾಲಯದವರೆಗೆ ಸಾಗಿದವು.
ಸಮಾರೋಪದಲ್ಲಿ ಕ್ರಾಸ್ ಬೈಕ್ಸ್ನ ವಲಯ ಮಾರಾಟ ಮುಖ್ಯಸ್ಥ ಆರ್.ಎಸ್.ಜಾಮ್ವಾಲ್, ಐಡಿಯಲ್ ಐಸ್ಕ್ರೀಮ್ನ ಮುಕುಂದ ಕಾಮತ್, ಐಒಸಿಎಲ್ನ ವಿಭಾಗೀಯ ಮಾರಾಟ ಮುಖ್ಯಸ್ಥ ಯೋಗೇಶ್ ಪಾಟಿದಾರ್, ಕಶಾರ್ಪ್ ಫಿಟ್ನೆಸ್ನ ಆನಂದ ಪ್ರಭು, ಗೃಹಿಣಿ ಮಸಾಲದ ಶುಭಾನಂದ ಮತ್ತು ಶಿವಾನಂದ ರಾವ್, ತಾಜ್ ಸೈಕಲ್ ಕಂಪನಿಯ ಎಸ್.ಎಂ.ಮುತಾಲಿಬ್ ಭಾಗವಹಿಸಿದ್ದರು. ಅದೃಷ್ಟ ಶಾಲಿಗಳಾದ ಮುಹಮ್ಮದ್ ದಿಯಾನ್ ಮತ್ತು ಇವಾನ್ ಡಿಸೋಜ ಅವರಿಗೆ ಸೈಕಲ್ ಅನ್ನು ಬಹುಮಾನವಾಗಿ ನೀಡಲಾಯಿತು.
ಸೈಕ್ಲಿಸ್ಟ್ಗಳಾದ ಗ್ಲಿಯೋನಾ ಡಿಸೋಜ, ಹಾರ್ದಿಕ್ ರೈ, ಶಮಂತ್ ಭಟ್ ಅವರನ್ನು ಸನ್ಮಾನಿಸಲಾಯಿತು. ಸೈಕ್ಲಿಸ್ಟ್ಗಳನ್ನು ವಿ ಆರ್ ಸೈಕ್ಲಿಂಗ್ ಅಧ್ಯಕ್ಷ ಸರ್ವೇಶ ಸಾಮಗ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.