ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ವರ್ಧನಿ ಸಂಸ್ಥೆಯ ಸಹಯೋಗದಲ್ಲಿ ಇದೇ ಏ. 18ರಿಂದ 20ರವರೆಗೆ 5ರಿಂದ 9ನೇ ತರಗತಿಯ ಕೊಂಕಣಿ ಮಕ್ಕಳಿಗಾಗಿ 3 ದಿನಗಳ ಉಚಿತ ಸನಿವಾಸಿ ರಂಗ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
18ರಂದು ಬೆಳಿಗ್ಗೆ 9.30ಕ್ಕೆ ಮಾಸ್ಟರ್ ಅಂಕುಶ ಭಟ್ ಕಾರ್ಯಾಗಾರ ಉದ್ಘಾಟಿಸುವರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಅಧ್ಯಕ್ಷತೆ ವಹಿಸಲಿದ್ದು, ಟ್ರಸ್ಟಿಗಳು ಭಾಗವಹಿಸುವರು.
ಕಾರ್ಯಾಗಾರದಲ್ಲಿ ರಂಗ ಚಟುವಟಿಕೆಗಳು, ಸಂಗೀತದ ಜೊತೆ ನಾಟಕ ದೃಶ್ಯ ಕಟ್ಟುವಿಕೆ, ಪಾತ್ರ ಪೋಷಣಾ ಕ್ರಮ, ರಂಗ ಅಭ್ಯಾಸ, ಸಂಗೀತ, ನೃತ್ಯ ಕಲಿಕೆ, ದೃಶ್ಯ ಸಂಭಾಷಣೆ, ಹಾವ ಭಾವ ಅಭ್ಯಾಸ, ಸಂಭಾಷಣೆ, ಪಾತ್ರ ಹೊಂದಾಣಿಕೆ ಅಭ್ಯಾಸ, ಸ್ವರಾಭ್ಯಾಸ, ಕೋಲಾಟ, ಭಜನೆ, ವ್ಯಾಯಾಮ, ಧ್ಯಾನ ಮೊದಲಾದ ವಿಷಯಗಳಲ್ಲಿ ತರಬೇತಿ ನೀಡಲಾಗುವುದು.
ಸಾಧನಾ ಬಳಗದ ಮುಖ್ಯಸ್ಥ, ಕಾರ್ಯಾಗಾರದ ಸಂಚಾಲಕ ಪ್ರಕಾಶ ಶೆಣೈ, ಚಲನಚಿತ್ರ, ರಂಗ ನಿರ್ದೇಶಕ ಜಗನ್ ಪವಾರ್, ಮೇಕಪ್ ತರಬೇತುದಾರ ಅರುಣ್ ಪ್ರಕಾಶ ನಾಯಕ್, ರಂಗ ಸಂಗೀತ ನಿರ್ದೇಶಕಿ ಭಾವನಾ ವಿ. ಪ್ರಭು, ರಂಗ ನೃತ್ಯ ನಿರ್ದೇಶಕಿ ವೃಂದಾ ನಾಯಕ, ಯೋಗ ತರಬೇತಿ ನಿರ್ದೇಶಕ ಎಂ. ನಾಗೇಶ ಪ್ರಭು, ಕೊಂಕಣಿ ಸುಗಮ ಸಂಗೀತ ತರಬೇತುದಾರೆ ಸುಚಿತ್ರಾ ಎಸ್. ಶೆಣೈ ಮೊದಲಾದ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುವರು.
20ರಂದು ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರಂಗ ನಾಟಕ ಕಲಾವಿದ ಎಚ್. ಸತೀಶ್ ನಾಯಕ್ ಭಾಗವಹಿಸುವರು. ಅಂದು ಮಕ್ಕಳ 3 ದಿನಗಳ ಅಭ್ಯಾಸದ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.