ADVERTISEMENT

ನೀರು ಹರಿಯಲು ಇಲ್ಲ ಜಾಗ: ಪಾದಚಾರಿಗಳಿಗಿಲ್ಲ ಮಾರ್ಗ

ಕುಂಜತ್ತ್‌ಬೈಲ್‌ ದಕ್ಷಿಣ ವಾರ್ಡ್‌: ಉರಿಯದ ಬೀದಿ ದೀಪಗಳು, ಸಾರ್ವಜನಿಕರ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 16 ಮೇ 2025, 6:16 IST
Last Updated 16 ಮೇ 2025, 6:16 IST
ಕುಂಜತ್ತಬೈಲಿನ ಮುಖ್ಯರ‌ಸ್ತೆಯಲ್ಲಿ ಪಾದಚಾರಿ ಮಾರ್ಗ ಇಲ್ಲದಿರುವುದು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಕುಂಜತ್ತಬೈಲಿನ ಮುಖ್ಯರ‌ಸ್ತೆಯಲ್ಲಿ ಪಾದಚಾರಿ ಮಾರ್ಗ ಇಲ್ಲದಿರುವುದು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್   

ಮಂಗಳೂರು: ಚರಂಡಿ ವ್ಯವಸ್ಥೆ ಇಲ್ಲದ ರಸ್ತೆ, ಸಮರ್ಪಕವಾದ ಪಾದಚಾರಿ ಮಾರ್ಗ ಇಲ್ಲದೆ ರಸ್ತೆಯಲ್ಲೇ ಓಡಾಡಬೇಕಲಾದ ಅನಿವಾರ್ಯತೆ, ಬೀದಿ ದೀಪಗಳಿಲ್ಲದ ರಸ್ತೆಗಳು...ಇವು ಕುಂಜತ್ತ್‌ಬೈಲ್ ದಕ್ಷಿಣ ವಾರ್ಡ್‌ನ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು.

ಬಹುತೇಕ ಎಲ್ಲ ಕಡೆ ಸಮರ್ಪಕ ರಸ್ತೆಗಳಿವೆ. ಆದರೆ, ಅವುಗಳಿಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಕೆಲವೊಮ್ಮೆ ರಸ್ತೆ ಮೇಲೆಯೇ ಹರಿಯುತ್ತದೆ. ಸಮರ್ಪಕ ಚರಂಡಿ ಕಲ್ಪಿಸದಿದ್ದರೆ ಮಳೆಗಾಲದಲ್ಲಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಚರಂಡಿಯಲ್ಲಿನ ಹೂಳು, ಸುತ್ತಮುತ್ತ ಬೆಳೆದ ಪೊದೆ, ಗಿಡಗಂಟಿಗಳನ್ನು ತೆರವುಗೊಳಿಸಿದರೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಿದೆ.

ಕಾವೂರು ಜಂಕ್ಷನ್‌ನಲ್ಲಿ 4 ರಸ್ತೆಗಳು ಹಾದುಹೋಗುತ್ತವೆ. ಸಾರ್ವಜನಿಕ ಶೌಚಾಲಯವೇ ಇಲ್ಲ. ಆಟೊ ರಿಕ್ಷಾ ಚಾಲಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಮಹಿಳೆಯರಿಗೆ ಸಮಸ್ಯೆಯಾಗುತ್ತಿದೆ. ಇಲ್ಲಿ ಒಂದು ಶೌಚಾಲಯ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ADVERTISEMENT

ಹಲವಾರು ವರ್ಷಗಳಿಂದ ನಮ್ಮ ವಾರ್ಡ್‌ನಲ್ಲಿ ಚರಂಡಿಯದ್ದೇ ಸಮಸ್ಯೆ. ಹಲವು ವರ್ಷಗಳಾದರೂ ಇನ್ನೂ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಕೆಲವೆಡೆ ಚರಂಡಿಯೇ ಇಲ್ಲ. ಮಳೆಗಾಲದಲ್ಲಿ ತುಂಬಾ ಸಮಸ್ಯೆಯಾಗುತ್ತದೆ ಎಂದು ಸಮಾಜ ಸೇವಕಿ ರೇಗೊ ಕಾವೂರು ತಿಳಿಸಿದರು.

ಕಾವೂರು ಜಂಕ್ಷನ್‌ನಿಂದ ಮರಕಡ ಸಂಪರ್ಕಿಸುವ ರಸ್ತೆ, ಕುಂಜತ್ತಬೈಲ್, ಜ್ಯೋತಿನಗರದಲ್ಲಿ ಸಮರ್ಪಕ ಚರಂಡಿ ಇಲ್ಲ. ಇಲ್ಲಿ ಹಲವಾರು ಮನೆಗಳಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದರೂ ಪರಿಹಾರ ಸಿಕ್ಕಿಲ್ಲ. ಇತ್ತ ಬಂದು ನೋಡುವವರೇ ಇಲ್ಲ ಎಂದೂ ಅವರು ಅಳಲು ತೋಡಿಕೊಂಡರು.

ಇಲ್ಲಿನ ಪೊಲೀಸ್‌ ಠಾಣೆಯ ಬಳಿ ಖಾಲಿ ಜಾಗಗಳಲ್ಲಿ ಹಳೆಯ ವಾಹನಗಳನ್ನು ನಿಲ್ಲಿಸಲಾಗಿದ್ದು, ತುಕ್ಕು ಹಿಡಿಯುತ್ತಿವೆ. ಪಾದಚಾರಿ ಮಾರ್ಗಗಳಲ್ಲೂ ದೊಡ್ಡ ವಾಹನಗಳನ್ನು ನಿಲ್ಲಿಸಲಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ಅವುಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಸಂಬಂಧಪಟ್ಟವರು ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಂಗಳೂರಿನ ಕಾವೂರು ಪೊಲೀಸ್ ಠಾಣೆ ಎದುರು ನಿಲ್ಲಿಸಿರುವ ಜಪ್ತಿ ಮಾಡಿರುವ ಅಪಘಾತ ವಾಹನಗಳು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಕಾವೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರಸ್ತಿ ಕಾರ್ಯ ನಡೆಯುತ್ತಿದೆ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್

ಅಭಿವೃದ್ಧಿ ಕೆಲಸಗಳಿಗೆ ಅನುದಾನ ಕೊರತೆ

ರಸ್ತೆಗಳು ತೋಡುಗಳ ಅಭಿವೃದ್ಧಿ ಹೊಸ ರಸ್ತೆ ತೋಡುಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು. ಇನ್ನೂ ಹೆಚ್ಚು ಅಭಿವೃದ್ಧಿ ಕೈಗೊಳ್ಳಲು ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ಚರಂಡಿ ಸಮಸ್ಯೆ ಬಗ್ಗೆ ದೂರುಗಳು ಕೇಳಿ ಬಂದಿತ್ತು. ಬಹುತೇಕ ಚರಂಡಿ ಸಮಸ್ಯೆ ನಿವಾರಿಸಲಾಗಿದೆ. ಕೆಲವೆಡೆ ಹೊಸ ಚರಂಡಿ ನಿರ್ಮಿಸಲಾಗಿದೆ. ಹಳೆಯ ಚರಂಡಿ ತೆಗದು ಹೊಸದಾಗಿ ಅಳವಡಿಸಲಾಗಿದೆ. ಮಳೆಗಾಲದಲ್ಲಿ ಸಮಸ್ಯೆಯಾಗುವುದರಿಂದ ಮಳೆಗಾಲ ಆರಂಭಕ್ಕೆ ಮುನ್ನ ಚರಂಡಿ ಸರಿಪಡಿಸಲಾಗುತ್ತದೆ. ಬೀದಿ ದೀಪ ಅಳವಡಿಸಲು ಸಾರ್ವಜನಿಕರಿಂದ ಭಾರಿ ಬೇಡಿಕೆ ಬರುತ್ತಿದ್ದು ಅನುದಾನದ್ದೇ ಸಮಸ್ಯೆ. ಶಾಂತಿನಗರದಲ್ಲಿ ಎತ್ತರದ ಪ್ರದೇಶಗಳಲ್ಲಿ ನೀರು ಪೂರೈಕೆ ಸಮಸ್ಯೆಯಾಗುತ್ತಿದೆ ಎಂದು ವಾರ್ಡ್‌ ನಿಕಟಪೂರ್ವ ಸದಸ್ಯೆ ಸುಮಂಗಲಾ ರಾವ್‌ ತಿಳಿಸಿದರು.

ಶತಮಾನ ಪೂರೈಸಿದ ಶಾಲೆಗೆ ಕಟ್ಟಡ ಕೊಡುಗೆ

ಕಾವೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಪೂರೈಸಿದ್ದು ಸುಮಾರು ₹ 70 ಲಕ್ಷ ವೆಚ್ಚದಲ್ಲಿ ಶಾಲೆಯ ನವೀಕರಣ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಹಳೆಯ ಕಟ್ಟಡದ ಚಾವಣಿ ತೆಗೆದು ಹೊಸ ಚಾವಣಿ ಅಳವಡಿಸಲಾಗುತ್ತಿದೆ. ಹಿರಿಯ ವಿದ್ಯಾರ್ಥಿ ಕೇಶವ ಅಮೀನ್‌ ಅವರು 7 ಕೊಠಡಿಯ ಕಟ್ಟಡವನ್ನು ಕೊಡುಗೆಯಾಗಿ ನಿರ್ಮಿಸುತ್ತಿದ್ದಾರೆ. ಮೈದಾನ ಅಭಿವೃದ್ಧಿ ಮೂಲಸೌಕರ್ಯ ಅಭಿವೃದ್ಧಿ ಶಾಲೆಯ ನವೀಕರಣ ಕೆಲಸಗಳಿಗೂ ಅವರೇ ಪ್ರಾಯೋಜಕತ್ವ ವಹಿಸಿದ್ದಾರೆ. ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ತರಗತಿಗಳನ್ನು ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಶಿಕ್ಷಕಿ ಸೀತಮ್ಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.