ಜೈಲು (ಪ್ರಾತಿನಿಧಿಕ ಚಿತ್ರ)
ಮಂಗಳೂರು: ರಸ್ತೆ ಅಪಘಾತದಲ್ಲಿ ಯುವಕನ ಸಾವಿಗೆ ಕಾರಣವಾದ ಮೀನು ಸಾಗಾಟ ಲಾರಿ ಚಾಲಕನಿಗೆ ಇಲ್ಲಿನ ಜೆಎಂಎಫ್ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಶ್ ಅವರು 6 ತಿಂಗಳು ಜೈಲು ಹಾಗೂ ₹ 9,500 ದಂಡ ವಿಧಿಸಿ ಶನಿವಾರ ಆದೇಶ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬೈಲಖಂಡುವಿನ ಅಬುಜರ್ ಕಾಲೊನಿ ನಿವಾಸಿ ಮೊಹಮ್ಮದ್ ಜಾಫರ್ ಸಾಬ್ (32) ಶಿಕ್ಷೆಗೆ ಒಳಗಾದ ಚಾಲಕ.
ನಗರದ ನಂತೂರು ವೃತ್ತದಿಂದ ಪಂಪ್ವೆಲ್ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೀನು ಸಾಗಿಸುತ್ತಿದ್ದ ಕಂಟೈನರ್ ಲಾರಿಯೊಂದು 2021ರ ಸೆ. 28ರಂದು ಇನ್ನೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಕಂಟೈನರ್ ಲಾರಿಯ ಹಿಂಬದಿ ಚಕ್ರದಡಿ ಸಿಲುಕಿ ದ್ವಿಚಕ್ರವಾಹನ ಸವಾರ ಮಾನಸ್ ರಾಮನಾಥ್ ಉಗಲೆ (23) ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಕದ್ರಿಯ ಸಂಚಾರ ಪೂರ್ವ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಲಾರಿ ಚಾಲಕ ಮೊಹಮ್ಮದ್ ಜಾಫರ್ ಸಾಬ್ ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿತ್ತು ಎಂದು ಸಂಚಾರ ಪೂರ್ವ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಭಟ್ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲರಾದ ಗೀತಾ ರೈ ಅವರು ಸಾಕ್ಷಿಗಳ ವಿಚಾರಣೆ ನಡೆಸಿ, ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.