ADVERTISEMENT

ಮಂಗಳೂರು ಮಲಯಾಳಿ ಸಂಗಮ 6ಕ್ಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 2:29 IST
Last Updated 4 ಜನವರಿ 2024, 2:29 IST

ಮಂಗಳೂರು: ಇಲ್ಲಿನ ಕೇರಳ ಸಮಾಜಂ ನೇತೃತ್ವದಲ್ಲಿ ‘ಮಂಗಳೂರು ಮಲಯಾಳಿ ಸಂಗಮ–2024’ ಕಾರ್ಯಕ್ರಮವನ್ನು ಜ.6ರಂದು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಪ್ರಮುಖರಾದ ಮುರಳಿ ಎಚ್ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಜಾತಿ, ಸಮುದಾಯ ಧರ್ಮ ಮೀರಿ ವೈವಿಧ್ಯ ಹಿನ್ನೆಲೆಯ ಜನರು, ಸಂಘಟನೆಗಳ ನಡುವೆ ಏಕತೆ ಹಾಗೂ ಬಾಂಧವ್ಯ ಬಲಪಡಿಸುವ ಆಶಯದೊಂದಿಗೆ, ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ, ಕರ್ನಾಟಕ ಮಲಯಾಳಿ ವಿಶ್ವಕರ್ಮ ಸಮಾಜ, ಕೈರಳ ಕಲಾ ವೇದಿ ಸುರತ್ಕಲ್ ಹಾಗೂ ಇನ್ನಿತರ ಸಂಘಟನೆಗಳ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಅಂದು ಮಧ್ಯಾಹ್ನ 3 ಗಂಟೆಗೆ ಸೇಂಟ್ ಅಲೋಶಿಯಸ್ ಕಾಲೇಜು ಮೈದಾನದಿಂದ ಹೊರಡುವ ಮೆರವಣಿಗೆಯು ಜ್ಯೋತಿ ಸರ್ಕಲ್ ಮಾರ್ಗವಾಗಿ ಪುರಭವನದಲ್ಲಿ ಸಮಾಪ್ತಿಗೊಳ್ಳಲಿದೆ. 4.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಸಮಾಜಂ ಅಧ್ಯಕ್ಷ ಟಿ.ಕೆ. ರಾಜನ್ ವಹಿಸುವರು. ಅತಿಥಿಗಳಾಗಿ ಚಿತ್ರ ನಿರ್ಮಾಪಕ ಗೋಕುಲಂ ಗೋಪಾಲನ್, ಚಿತ್ರನಟ ಜಯಸೂರ್ಯ, ಗಾಯಕ ಗುರುಕಿರಣ್, ಯೂನಿಯನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ರೇಣು ಕೆ. ನಾಯರ್ ಭಾಗವಹಿಸುವರು. ಸಂಗೀತ ನಿರ್ದೇಶಕ ಎಂ.ಜಿ. ಶ್ರೀಕುಮಾರ್ ಅವರಿಗೆ ‘ಜನಪ್ರಿಯ ಗಾಯಕ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನಂತರ ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ADVERTISEMENT

ಸಂಘಟಕರಾದ ಗೋಪಾಲನ್, ಸಿ.ವಿಜಯ ಕುಮಾರ್, ಸಂದೇಶ್ ಎಂ, ವಿ.ಎಂ. ಸತೀಶನ್, ನಿಕಲ್‍ಬೋಸ್ ಸಿ.ಪಿ., ಟಿ.ಕೆ.ಎಸ್.ಬೆಳ್ಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.