ಮುಡಿಪು: ‘ಪುರಾಣದ ಕಥೆಯಾದರೂ ಅರ್ಥಗಾರಿಕೆಯ ಒಳನೋಟಗಳಿಂದ, ಆಧುನಿಕ ಚಿಂತನೆಗಳನ್ನು ಒಳಗೊಂಡು ಯಕ್ಷಗಾನವು ವರ್ತಮಾನಕ್ಕೆ ಹಲವು ಸಂದೇಶಗಳನ್ನು ಒದಗಿಸುತ್ತಿದೆ’ ಎಂದು ಜಾನಪದ ವಿದ್ವಾಂಸ ಡಾ. ಕೆ ಚಿನ್ನಪ್ಪಗೌಡ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಶನಿವಾರ ನಡೆದಯಕ್ಷಗಾನ ತಾಳಮದ್ದಳೆ ಹಾಗೂ ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯಕ್ಷಗಾನ ತನ್ನ ವೈಭವವನ್ನು ಕಳೆದುಕೊಳ್ಳುತ್ತಿದೆ, ಯುವಕರು ಇದರಿಂದ ವಿಮುಖರಾಗುತ್ತಿದ್ದಾರೆ ಎಂಬ ವಾದ ಸರಿಯಲ್ಲ. ನಾಲ್ಕು ಪೆಟ್ಟಿಗೆ ವೇಷಗಳಿದ್ದ ಕಾಲದಿಂದ ಇವತ್ತು ಬಹು ಮುಂದೆ ಬಂದು ಕಾಲದ ಅಗತ್ಯಗಳನ್ನು ಒಳಗೊಂಡು ಹೊಸತಲೆಮಾರನ್ನು ಆಕರ್ಷಿಸುತ್ತಿದೆ’ ಎಂದರು. ಯಕ್ಷಗಾನ ಅಧ್ಯಯನ ಕೇಂದ್ರದ ಚಟುವಟಿಕೆಗಳು, ಇಲ್ಲಿನ ಯಕ್ಷಮಂಗಳ ಮ್ಯೂಸಿಯಂ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಾಂಸ್ಕೃತಿಕ ಅನನ್ಯತೆಯನ್ನು ಒದಗಿಸಿದೆ ಎಂದರು.
ಯಕ್ಷಗಾನದ ಶೈಕ್ಷಣಿಕ ಅಧ್ಯಯನ: ತಾಳಮದ್ದಳೆ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಕುಲಸಚಿವ ಪ್ರೊ.ಕಿಶೋರ್ ಕುಮಾರ್ ಸಿ.ಕೆ., ‘ಯಕ್ಷಗಾನ ಶ್ರೀಮಂತ ಕಲೆ. ಕರಾವಳಿಯ ಜನಜೀವನ, ಸಂಸ್ಕೃತಿಯ ಮೇಲೆ ಅದರ ಗಾಢವಾದ ಪ್ರಭಾವವಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯಕ್ಷಗಾನವನ್ನು ಶೈಕ್ಷಣಿಕ ಕಾಳಜಿಯಿಂದ ಅಧ್ಯಯನ ಕೈಗೊಳ್ಳುವ ವ್ಯವಸ್ಥೆಯನ್ನು ಕೇಂದ್ರದ ಮೂಲಕ ನಡೆಸಲಾಗುವುದು’ ಎಂದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಕಲಾವಿದರಿಂದ ‘ಭಕ್ತ ಸುಧನ್ವ’ ಯಕ್ಷಗಾನ ತಾಳಮದ್ದಳೆ ಹಾಗೂ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನವು ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.