ಮಂಗಳೂರು: ನಗರದಲ್ಲಿ ಡಿಸೆಂಬರ್ 19ರಂದು ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿಯಾಗಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಗುರುವಾರ ಸಾಕ್ಷಿಗಳ ವಿಚಾರಣೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟನಾವಳಿಯ ವಿಡಿಯೊಗಳನ್ನು ಹಾಜರುಪಡಿಸಲು ಮಂಗಳೂರು ಪೊಲೀಸ್ ಆಯುಕ್ತರಿಗೆ ತಿಳಿವಳಿಕೆ ಪತ್ರ ಬರೆಯಲಾಗಿತ್ತು. ಅದರಂತೆ 50 ವಿಡಿಯೊ ದೃಶ್ಯಾವಳಿ ಇರುವ ಪೆನ್ಡ್ರೈವ್ ಅನ್ನು ಪೊಲೀಸರು ಹಾಜರುಪಡಿಸಿದ್ದಾರೆ. ತನಿಖಾ ಉದ್ದೇಶದಿಂದ ಪೊಲೀಸರು ವಶಕ್ಕೆ ಪಡೆದಿದ್ದ 20 ಡಿವಿಆರ್ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರ ಸ್ವೀಕೃತಿಯನ್ನು ಪೊಲೀಸ್ ನೋಡಲ್ ಅಧಿಕಾರಿಯಾಗಿರುವ ಎಸಿಪಿ ಬೆಳ್ಳಿಯಪ್ಪ ಹಾಜರುಪಡಿಸಿದ್ದಾರೆ’ ಎಂದು ತಿಳಿಸಿದರು.
‘ಮ್ಯಾಜಿಸ್ಟೀರಿಯಲ್ ತನಿಖೆಗೆ ಈ ಮೊದಲು 201 ಮಂದಿ ಸಾಕ್ಷಿ ಹಾಜರುಪಡಿಸಿದ್ದರು. ಗುರುವಾರ ಇಬ್ಬರು ಸಾಕ್ಷಿ ಹೇಳಿದ್ದು, ಇದುವರೆಗೆ ಒಟ್ಟು 203 ಮಂದಿಯ ಸಾಕ್ಷಿಗಳನ್ನು ದಾಖಲಿಸಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬರು ಮೊಬೈಲ್ ರೆಕಾರ್ಡಿಂಗ್ ಅನ್ನು ಹಾಜರುಪಡಿಸಿದ್ದಾರೆ’ ಎಂದರು.
‘ಇದೇ 24ರಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು, ಇಲ್ಲಿಯವರೆಗಿನ ತನಿಖೆಯ ವರದಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಪೂರ್ಣ ವರದಿ ಸಲ್ಲಿಸಲು ಮೂರು ತಿಂಗಳ ಅವಕಾಶವಿದೆ. ಪೊಲೀಸ್ ಇಲಾಖೆಯವರನ್ನು ಇಲ್ಲಿಯವರೆಗೆ ವಿಚಾರಣೆ ಮಾಡಿಲ್ಲ. ಎಲ್ಲ ಪೂರ್ಣಗೊಂಡ ಬಳಿಕ ವರದಿ ಸಲ್ಲಿಸಲಾಗುವುದು’ ಎಂದು ಹೇಳಿದರು.
‘ಗುರುವಾರ ಕೇವಲ ಇಬ್ಬರು ಹೇಳಿಕೆ ನೀಡಿದ್ದು, ಜನರ ಅನುಕೂಲಕ್ಕಾಗಿ ಇದೇ 19ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.