
ಮಂಗಳೂರು: ಶಿವಾಜಿ ಜಯಂತಿಯ ಪ್ರಯುಕ್ತ ಬಜಾಲ್ ಜಲ್ಲಿಗುಡ್ಡೆಯ ಅಂಬಾಭವಾನಿ ಗೇಮ್ಸ್ ಟೀಮ್ ವತಿಯಿಂದ ಸಮಾಜದ ಪುರುಷರಿಗಾಗಿ ‘ಮರಾಠ ಟ್ರೋಪಿ 2024’ ಕ್ರಿಕೆಟ್ ಹಾಗೂ ಮಹಿಳೆಯರಿಗಾಗಿ ಥ್ರೋಬಾಲ್ ಪಂದ್ಯಾಟವನ್ನು ಇದೇ 3 ಮತ್ತು 4ರಂದು ನಗರದ ನೆಹರೂ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಅಂಬಾ ಭವಾನಿ ಭಜನಾ ಮಂಡಳಿಯ ಅಧ್ಯಕ್ಷ ಸುಧಾಕರ ರಾವ್ ಪಾಟೀಲ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ ಐಪಿಎಲ್ ಮಾದರಿಯಲ್ಲಿ ನಡೆಯುವ ಈ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳೂರು, ಕಾಸರಗೋಡು ಮತ್ತು ಉಡುಪಿ ಜಿಲ್ಲೆಗಳ ಎಂಟು ತಂಡಗಳು ಭಾಗವಹಿಸಲಿವೆ. ಚಾಂಪಿಯನ್ ಆಗಿ ಹೊರಹೊಮ್ಮುವ ತಂಡ ಟ್ರೋಫಿ ಹಾಗೂ ₹ 1 ಲಕ್ಷ ನಗದು, ರನ್ನರ್ಅಪ್ ತಂಡವು ಟ್ರೋಫಿ ಮತ್ತು ₹ 50 ಸಾವಿರ, ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳಯ ಟ್ರೋಪಿಯನ್ನು ಪಡೆಯಲಿವೆ. ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಹಿಡಿತಗಾರ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ತ್ರೋಬಾಲ್ ಪಂದ್ಯಾಟದ ವಿಜೇತ ತಂಡಕ್ಕೆ ₹ 10ಸಾವಿರ ನಗದು ಮತ್ತು ಟ್ರೋಫಿ, ರನ್ನರ್ ಅಪ್ ತಂಡಕ್ಕೆ ₹ 5 ಸಾವಿರ ಮತ್ತು ಟ್ರೋಫಿ, ಮೂರನೇ ಮತ್ತು ನಾಲ್ಕನೇ ಬಹುಮಾನ ಪಡೆದವರಿಗೆ ಟ್ರೋಫಿ ನೀಡಲಾಗುತ್ತದೆ’ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಕ್ರೀಡಾಕೂಟವನ್ನು ಶನಿವಾರ ಬೆಳಿಗ್ಗೆ 8.30ಕ್ಕೆ ಉದ್ಘಾಟಿಸುವರು. ಇದೇ ಭಾನುವಾರ ಸಂಜೆ ನಡೆಯುವ ಸಮಾರೋಪದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ಭಾಗವಹಿಸುವರು ಎಂದರು.
ಸಂಸ್ಥೆಯ ಪದಾಧಿಕಾರಿಗಳಾದ ನಿಖಿಲ್ ಜಾಧವ್, ದೇವಿಪ್ರಸಾದ್ ರಾವ್, ಗಣೇಶ ಪವಾರ್, ಜೀವನ್ ಜಗತಾಪ, ಗೋಕುಲ್ ಲಾಡ, ಅನುರಾಜ್, ಹೃತಿಕ್ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.