ಮಂಗಳೂರು: ಸಮುದ್ರದಲ್ಲಿ ಅವಘಡ ಸಂಭವಿಸಿದ ವೇಳೆ ಶೋಧನೆ ಹಾಗೂ ರಕ್ಷಣೆಯ ಕಾರ್ಯದಲ್ಲಿ ಶೇ 100 ರಷ್ಟು ಯಶಸ್ಸು ಸಾಧಿಸಿದ್ದರೂ, ಕಡಲು ಪ್ರಕ್ಷುಬ್ಧವಾಗಿರುವ ಸಮಯದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳು ಇನ್ನೂ ಹಲವಾರು ಇವೆ ಎಂದು ಕರಾವಳಿ ಕಾವಲು ಪಡೆಯ ಕಮಾಂಡರ್ ಎಸ್.ಬಿ. ವೆಂಕಟೇಶ್ ಹೇಳಿದರು.
ನಗರದ ಪಣಂಬೂರಿನ ಕರಾವಳಿ ಕಾವಲು ಪಡೆಯ ಕಚೇರಿಯಲ್ಲಿ ಗುರುವಾರ ಕಡಲ ಶೋಧ ಹಾಗೂ ರಕ್ಷಣೆ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಾಗತಿಕ ವಹಿವಾಟಿನ ಶೇ 90 ರಷ್ಟು ಪಾಲು ಸಮುದ್ರ ಮಾರ್ಗದಿಂದಲೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸರಕು ಸಾಗಣೆ ಹಡಗುಗಳ ಸುರಕ್ಷತೆ ಅತ್ಯಂತ ಮಹತ್ವದ್ದು. ವಿದೇಶಿ ವಹಿವಾಟಿನಲ್ಲಿ ರಾಜ್ಯದ ಕರಾವಳಿಯ ಪಾತ್ರವೂ ಮಹತ್ತರವಾಗಿದೆ ಎಂದು ತಿಳಿಸಿದರು.
ರಾಜ್ಯದ ಕರಾವಳಿಯ ಮೂಲಕ ಮಲೇಷ್ಯಾ, ಸಮುತ್ರಾ, ಜಾವ, ಕಾಂಬೋಡಿಯ, ಪರ್ಷಿಯಾ, ಈಜಿಪ್ಟ್ವರೆಗೂ ಸರಕು ಸಾಗಣೆ ಮಾಡಲಾಗುತ್ತಿದೆ. ಭಾರತದ ಕರಾವಳಿಯಲ್ಲಿ ಶೋಧನೆ ಹಾಗೂ ರಕ್ಷಣಾ ಕಾರ್ಯವನ್ನು ಕರಾವಳಿ ಕಾವಲು ಪಡೆ ಮಾಡುತ್ತಿದೆ. ಚೆನ್ನೈ, ಮುಂಬೈ ಹಾಗೂ ಪೋರ್ಟ್ಬ್ಲೇರ್ನ ಮರಿಟೈಮ್ ರೆಸ್ಕ್ಯೂ ಕೋಆರ್ಡಿನೇಷನ್ ಸೆಂಟರ್ಗಳ ಸಹಕಾರ ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕರಾವಳಿ ಪೊಲೀಸ್ ಪಡೆ, ಕಸ್ಟಮ್ಸ್, ಇಮಿಗ್ರೇಷನ್, ಮೀನುಗಾರಿಕೆ ಇಲಾಖೆ, ಮೀನುಗಾರಿಕೆ ಸಂಘಟನೆಗಳು, ರೆಡ್ಕ್ರಾಸ್ ಪ್ರತಿನಿಧಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.