ADVERTISEMENT

ಸಮಾನ ಮನಸ್ಕರಿಂದ ಕಲೆಯ ಉಳಿವು

ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ‘ಮತ್ಸ್ಯವರ್ಣ’: ಡಾ.ಎಂ.ಮೋಹನ ಆಳ್ವ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 12:14 IST
Last Updated 5 ಜುಲೈ 2019, 12:14 IST
ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಮತ್ಸ್ಯವರ್ಣ ಉದ್ಘಾಟಿಸಿದ ಮೂಡುಬಿದಿರೆಯ ಡಾ.ಎಂ.ಮೋಹನ ಆಳ್ವ ಮಾತನಾಡಿದರು
ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಮತ್ಸ್ಯವರ್ಣ ಉದ್ಘಾಟಿಸಿದ ಮೂಡುಬಿದಿರೆಯ ಡಾ.ಎಂ.ಮೋಹನ ಆಳ್ವ ಮಾತನಾಡಿದರು   

ಮಂಗಳೂರು: ಒಳ್ಳೆಯ ಮನಸ್ಸು ಹಾಗೂ ಸೌಂದರ್ಯ ಪ್ರಜ್ಞೆಯ ಮೂಲಕ ನಮ್ಮ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸಬೇಕು ಎಂದು ಆಳ್ವಾಸ್‌ ಎಜ್ಯುಕೇಶನ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.

ಕರ್ನಾಟಕ ಪಶು, ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ ಅಧೀನದ ನಗರದ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಕರಾವಳಿ ಚಿತ್ರಕಲಾ ಚಾವಡಿ ಸಹಯೋಗದಲ್ಲಿ ಹಮ್ಮಿಕೊಂಡ ‘ಮತ್ಸ್ಯವರ್ಣ’ಕಲಾ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಕಲೆ ಮತ್ತು ಸಂಸ್ಕೃತಿಗೆ ರಾಜಾಶ್ರಯ ಇತ್ತು. ಆದರೆ, ಈಗಿನ ಸರ್ಕಾರಗಳಿಂದ ಕಲೆ ಮತ್ತು ಸಂಸ್ಕೃತಿ ಉಳಿಯುತ್ತದೆ ಎಂಬ ಭರವಸೆ ಮೂಡುತ್ತಿಲ್ಲ. ಹೊಸ ಸರ್ಕಾರದ ಬಗ್ಗೆ ಭಾರಿ ವೈಭವೀಕರಣ ನಡೆಯುತ್ತಿದ್ದರೂ. ಆಂತರಿಕವಾಗಿ ಅಂತಹ ನಿರೀಕ್ಷೆ ಕಂಡುಬರುತ್ತಿಲ್ಲ. ಹೀಗಾಗಿ, ಸಮಾನಮನಸ್ಕರ ಜೊತೆಗೂಡಿ ಕಲಾವಿದರೇ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಅವರು ಹೇಳಿದರು.

ADVERTISEMENT

ಕಲೆಯು ಈ ನೆಲದಲ್ಲಿ ಹಾಸುಹೊಕ್ಕಿದೆ ಎಂದ ಅವರು, ನಾವು ಕಾಲೇಜಿಗೆ ಹೋಗುವಾಗಲೇ ಮೀನುಗಾರಿಕಾ ಹಾಗೂ ಇತರ ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಕುಣಿದು ಸಂಭ್ರಮಿಸುತ್ತಿದ್ದೆವು ಎಂದು ಮೆಲುಕು ಹಾಕಿದರು.

ಮಹಾವಿದ್ಯಾಲಯದ ಡೀನ್ ಸೆಂಥಿಲ್ ವೇಲ್ ಮಾತನಾಡಿ, ಕಲೆಯನ್ನು ಹವ್ಯಾಸವಾಗಿ ಅಭ್ಯಾಸ ಮಾಡುತ್ತಿದ್ದರು. ಆದರೆ, ಈಗ ಕಲಾಪ್ರಕಾರಗಳೂ ವೃತ್ತಿಯಾಗಿವೆ. ಅಲ್ಲದೇ, ಕಲೆಯು ಇತರ ಪ್ರಕಾರಗಳಲ್ಲಿ ಹೊಸತನವನ್ನು ನೀಡುತ್ತಿದೆ ಎಂದರು.

ಪ್ರಸಾದ್ ಕಲಾ ಗ್ಯಾಲರಿಯ ಕೋಟಿ ಪ್ರಸಾದ್ ಆಳ್ವ, ಮತ್ಸ್ಯವರ್ಣ ಸಂಯೋಜಕ ಡಾ.ಎಸ್.ಎಂ.ಶಿವಪ್ರಕಾಶ್ ಇದ್ದರು.

ನಾಡಿನ ಹಲವಾರು ಖ್ಯಾತ ಕಲಾವಿದರು ಮಹಾವಿದ್ಯಾಲಯದ ಆವರಣದಲ್ಲಿ ಕಲಾಕೃತಿಗಳನ್ನು ರಚಿಸಲಿದ್ದು, ಶಿಬಿರವು ಶನಿವಾರವೂ ನಡೆಯಲಿದೆ. ಜು.6ರಂದ ಮಧ್ಯಾಹ್ನ 12.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.