ಮಂಗಳೂರು: ನಗರಕ್ಕೆ ನೀರು ಪೂರೈಸುವ ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ 6 ಮೀಟರ್ ನೀರು ಸಂಗ್ರಹವಿದ್ದು, ನಗರಕ್ಕೆ 100 ದಿನ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ತೊಂದರೆ ಇಲ್ಲ ಎಂದು ಮೇಯರ್ ಭಾಸ್ಕರ್ ಕೆ. ಹೇಳಿದರು.
ತುಂಬೆಯಲ್ಲಿ ನೇತ್ರಾವತಿ ನದಿಗೆ ಬುಧವಾರ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಮೂಲಸೌಕರ್ಯಗಳಲ್ಲಿ ನೀರು ಅವಶ್ಯಕ. ಇಡೀ ರಾಜ್ಯದಲ್ಲಿಯೇ ನೀರಿನ ಕೊರತೆ ಇಲ್ಲದ ಸ್ಥಳವೆಂದರೆ ಮಂಗಳೂರು ಮಾತ್ರ. ಈ ಬಾರಿಯ ಬೇಸಿಗೆಯಲ್ಲಿ ನೀರಿನ ತೊಂದರೆ ಆಗದು ಎಂದರು.
ಕಳೆದ ವರ್ಷ ಮೇನಲ್ಲಿ ನೀರು ಕಡಿಮೆ ಇತ್ತು. ಮಳೆಗಾಲ ಬೇಗ ಪ್ರಾರಂಭವಾಗಿದ್ದರಿಂದ ನೇತ್ರಾವತಿ ತುಂಬಿ ಹರಿಯಿತು. ತುಂಬೆಯಲ್ಲಿ ಸದ್ಯಕ್ಕೆ 1 ಕೋಟಿ ಘನ ಮೀಟರ್ ಹಾಗೂ ಎಎಂಆರ್ ಡ್ಯಾಂನಲ್ಲಿ ಗರಿಷ್ಠ ಪ್ರಮಾಣದ 1.42 ಕೋಟಿ ಘನ ಮೀಟರ್ ನೀರು ಸಂಗ್ರಹವಾಗಿದೆ. ನೇತ್ರಾವತಿಯಲ್ಲಿ 20 ಕ್ಯೂಬಿಕ್ನಷ್ಟು ಒಳಹರಿವು ಇರುವುದರಿಂದ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ, ಸಿಹಿ ನೀರು ಮಾಡುವ ಯೋಜನೆಗೆ ಮಾಡುವ ವೆಚ್ಚವನ್ನು ತುಂಬೆ ಡ್ಯಾಮ್ಗೆ ವಿನಿಯೋಗ ಮಾಡಿದ್ದಲ್ಲಿ 7 ಮೀಟರ್ ನೀರು ನಿಲ್ಲಿಸಬಹುದು. ಈ ಕುರಿತು ವಿಧಾನ ಪರಿಷತ್ನಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಉಪ್ಪು ನೀರು ಸಂಸ್ಕರಣಕ್ಕೆ ಬಳಸುವ ವೆಚ್ಚವನ್ನು ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ 7 ಮೀಟರ್ ಸಂಗ್ರಹಿಸಿ, ಅದರಿಂದ ಮುಳುಗಡೆಯಾಗುವ ಕೃಷಿ ಭೂಮಿಯ ರೈತರಿಗೆ ಪರಿಹಾರ ನೀಡುವುದು ಉತ್ತಮ ಎಂದು ಹೇಳಿದರು.
ಕಳೆದ ವರ್ಷ ತುಂಬೆ ಅಣೆಕಟ್ಟೆಯ ಕಾಂಪೌಂಡ್ ಕುಸಿದಿದ್ದು, ಹೊಸ ಕಾಂಪೌಂಡ್ ನಿರ್ಮಾಣಕ್ಕೆ ₹8 ಕೋಟಿ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ನವೀನ್ ಡಿಸೋಜ, ಪ್ರವೀಣಚಂದ್ರ ಆಳ್ವ, ಲತಾ ಸಾಲ್ಯಾನ್, ರಾಧಾಕೃಷ್ಣ, ಪಾಲಿಕೆ ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ರೂಪಾ ಬಂಗೇರ, ಡಿ.ಕೆ. ಅಶೋಕ್, ದೀಪಕ್ ಪೂಜಾರಿ, ಸುಧೀರ್ ಶೆಟ್ಟಿ ಕಣ್ಣೂರ, ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನರೇಶ್ ಶೆಣೈ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.