ADVERTISEMENT

ಜನಾಭಿಪ್ರಾಯ ಪಡೆದು, ‘ಜಯಂತಿ’ಗೆ ಹೊಸ ಸ್ವರೂಪ

ಜನಾಕರ್ಷಣೆ ಕಳೆದುಕೊಂಡು, ಜಾತಿಗೆ ಸೀಮಿತ: ರವಿ ಆತಂಕ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 12:39 IST
Last Updated 30 ಸೆಪ್ಟೆಂಬರ್ 2019, 12:39 IST
ಮಂಗಳೂರಿನ ಸಂಘನಿಕೇತನದಲ್ಲಿ ಸೋಮವಾರ ನಡೆದ ವಾಕ್‌ ಮತ್ತು ಶ್ರವಣ ದೋಷವುಳ್ಳ ಮಕ್ಕಳ ಅಂತರರಾಷ್ಟ್ರೀಯ ಸಂಗಮದಲ್ಲಿ ವಿದ್ಯಾರ್ಥಿಯೊಬ್ಬ ಬರೆದ ಚಿತ್ರವನ್ನು ಸಚಿವ ಸಿ.ಟಿ. ರವಿ ವೀಕ್ಷಿಸುತ್ತಿರುವುದು. ಶಾಸಕ ವೇದವ್ಯಾಸ ಕಾಮತ್ ಇದ್ದಾರೆ–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಮಂಗಳೂರಿನ ಸಂಘನಿಕೇತನದಲ್ಲಿ ಸೋಮವಾರ ನಡೆದ ವಾಕ್‌ ಮತ್ತು ಶ್ರವಣ ದೋಷವುಳ್ಳ ಮಕ್ಕಳ ಅಂತರರಾಷ್ಟ್ರೀಯ ಸಂಗಮದಲ್ಲಿ ವಿದ್ಯಾರ್ಥಿಯೊಬ್ಬ ಬರೆದ ಚಿತ್ರವನ್ನು ಸಚಿವ ಸಿ.ಟಿ. ರವಿ ವೀಕ್ಷಿಸುತ್ತಿರುವುದು. ಶಾಸಕ ವೇದವ್ಯಾಸ ಕಾಮತ್ ಇದ್ದಾರೆ–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಮಂಗಳೂರು: ಸಮಗ್ರ ಜನಾಭಿಪ್ರಾಯ ಪಡೆದುಕೊಂಡು ‘ಜಯಂತಿಗಳ’ ಆಚರಣೆಗೆ ಹೊಸ ಸ್ವರೂಪ ನೀಡಲಾಗುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವ ಸಿ.ಟಿ. ರವಿ ಹೇಳಿದರು.

ಜಯಂತಿಗಳು ಜನಾಕರ್ಷಣೆ ಕಳೆದುಕೊಂಡು ಜಾತಿಗೆ ಸೀಮಿತಗೊಂಡಿವೆ. ಯಾಂತ್ರಿಕ ಹಾಗೂ ತಾಂತ್ರಿಕ ಕ್ರಮವಾಗಿದೆ ಎಂಬ ದೂರುಗಳಿವೆ. ಅದಕ್ಕಾಗಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಚಿಂತನಾ ಸಭೆ ನಡೆಸಿ, ಬಂದ ಜನಾಭಿಪ್ರಾಯದ ಅನ್ವಯ ನಿರ್ಧಾರ ಕೈಗೊಳ್ಳಲಾಗುವುದು. ಆದರೆ, ಇದು ಬಹಳ ಸೂಕ್ಷ್ಮ ವಿಷಯವಾಗಿದ್ದು, ರಾಜಕೀಯಕರಣಗೊಳಿಸುವ ಉದ್ದೇಶವಿಲ್ಲ’ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಗ್ರಾಮ ಮಾಹಿತಿ: ತಜ್ಞರು ಹಾಗೂ ಪಿಯು ಮತ್ತು ಪದವಿ ವಿದ್ಯಾರ್ಥಿಗಳ ನೆರವು ಬಳಸಿಕೊಂಡು, ರಾಜ್ಯದ ಎಲ್ಲ ಗ್ರಾಮಗಳ ಮಾಹಿತಿಯನ್ನು ಸಂಗ್ರಹಿಸಿ, ‘ವಿಕಿಪೀಡಿಯಾ’ ಮಾದರಿಯಲ್ಲಿ ಪ್ರಕಟಿಸಲಾಗುವುದು.

ADVERTISEMENT

ನೀತಿ: ರಾಜ್ಯದಲ್ಲಿ ಪ್ರವಾಸೋದ್ಯಮವು ಆದ್ಯತಾ ಕ್ಷೇತ್ರವಾಗಿಲ್ಲ. ಮುಂದಿನ ವರ್ಷ ಹೊಸ ‘ಪ್ರವಾಸೋದ್ಯಮ ನೀತಿ’ಯನ್ನು ಪ್ರಕಟಿಸಲಾಗುವುದು. ಇಲಾಖೆಯ ಯೋಜನೆಗಳನ್ನು ಆದ್ಯತಾವಾರು ಪರಿಗಣಿಸಲು ‘ಬೇಡಿಕೆಗಳ ಅಧ್ಯಯನ’ ಹಾಗೂ ‘ಸಾಮಾಜಿಕ ಲೆಕ್ಕಪರಿಶೋಧನೆ’ ನಡೆಸಲಾಗುವುದು’ ಎಂದರು.

‘ಪ್ರವಾಸೋದ್ಯಮಕ್ಕಾಗಿ ಅಬಕಾರಿ ಹಾಗೂ ಇತರ ಕೆಲವು ನೀತಿಯನ್ನು ಬದಲಾಯಿಸಬೇಕು’ ಎಂಬ ತಜ್ಞರೊಬ್ಬರ ಸಲಹೆಗೆ ಪ್ರತಿಕ್ರಿಯಿಸಿದ ಅವರು, ‘ನಿಷೇಧದ ಬದಲು, ನಿಯಂತ್ರಣದ ನೀತಿಗಳನ್ನು ಜಾರಿಗೆ ತಂದರೆ, ಗೋವಾಕ್ಕೂ ಪೈಪೋಟಿ ನೀಡಬಹುದು’ ಎಂದು ಮಾರ್ಮಿಕವಾಗಿ ಉತ್ತರಿಸಿದರು.

105 ಮಂದಿಯ ತಲೆ ಮೇಲೆ 17 ಮಂದಿ!
‘17 ಶಾಸಕರ ಅನರ್ಹತೆಯ ಕಾರಣ, 105 ಸದಸ್ಯ ಬಲದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇತ್ತ ಪ್ರವಾಹದಿಂದ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ತಂತಿ ಮೇಲಿನ ನಡಿಗೆ ನನ್ನದು’ ಎಂದು ಹೇಳಿರಬಹುದು’ ಎಂದು ಸಚಿವ ಸಿ.ಟಿ. ರವಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘17 ಶಾಸಕ(ಅನರ್ಹ)ರಿಗೆ ಎಂದಿಗೂ ಕೃತಘ್ನರಾಗುವುದಿಲ್ಲ. ಆದರೆ, ನಾವು 105 ಶಾಸಕರಿದ್ದ ಕಾರಣಕ್ಕೆ ಅಧಿಕಾರಕ್ಕೆ ಬಂದಿದ್ದೇವೆ ಎಂಬುದನ್ನೂ ಅಲ್ಲಗಳೆಯಲಾಗದು. 105 ಮಂದಿಯ ತಲೆ ಮೇಲೆ 17 ಮಂದಿಯನ್ನು ಕೂರಿಸಲೂ ಸಾಧ್ಯವಿಲ್ಲ ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.